ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ

ಸೋಮವಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 19:35 IST
Last Updated 14 ಡಿಸೆಂಬರ್ 2019, 19:35 IST

ಭೂಸುಧಾರಣೆ ಅನುಷ್ಠಾನಕ್ಕೆ ಅರೆ ಮನಸ್ಸಿನ ಯತ್ನ: ಗ್ರಾಮಾಂತರ ಪ್ರದೇಶದಲ್ಲಿ ಸ್ಫೋಟಕ ಸ್ಥಿತಿ

ನವದೆಹಲಿ, ಡಿ. 14– ಭೂಸುಧಾರಣೆಗಳ ಬಗ್ಗೆ ಅರೆಮನಸ್ಸಿನ ಯತ್ನ, ಅವುಗಳ ಅನುಷ್ಠಾನಕ್ಕೆ ತಡೆಯೊಡ್ಡಲು ರಾಜ್ಯ ಸರ್ಕಾರಗಳು ಉದ್ದೇಶಪೂರ್ವಕವಾಗಿಯೇ ಕೃಷಿ ಶಾಸನದಲ್ಲಿ ಕುಂದು–ಕೊರತೆ ಬಿಡುವುದು– ಇವುಗಳಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಸ್ಫೋಟಕ ಪರಿಸ್ಥಿತಿಯುಂಟಾಗಿದೆ.

ಸಮಾಜವಾದಿ ಕಾರ್ಯಕ್ಕಾಗಿ ಅಖಿಲ ಭಾರತ ಕಾಂಗ್ರೆಸ್ ವೇದಿಕೆಯ ಪರವಾಗಿ, ಭೂಸುಧಾರಣೆ ಅನುಷ್ಠಾನದ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಮೇಲ್ಕಂಡಂತೆ ವ್ಯಕ್ತಪಡಿಸಲಾಗಿದೆ. ಕೋರಿಕೆ ಎ.ಐ.ಸಿ.ಸಿ.ಯಿಂದ ರಚಿತವಾದ ಭೂಸುಧಾರಣೆ ಮತ್ತು ಆರ್ಥಿಕ ಸಮಿತಿಗಳಿಗೆ ಈ ಅಧ್ಯಯನದ ವರದಿಯನ್ನು ಸಲ್ಲಿಸಲಾಗಿದೆ‌.

ADVERTISEMENT

ಕೃತಕ ಗೊಬ್ಬರ ಬಳಕೆ ಇಳಿಮುಖ: ಆತಂಕ

ನವದೆಹಲಿ, ಡಿ. 14– ಈ ವರ್ಷ ಕೃತಕ ಗೊಬ್ಬರದ ಬಳಕೆ ಕಡಿಮೆಯಾಗಿರುವುದಕ್ಕೆ ಕಾರಣವನ್ನು ಪರಿಶೀಲಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೃತಕ ಗೊಬ್ಬರದ ಉತ್ಪಾದನೆ ಮತ್ತು ಔದ್ಯೋಗಿಕ ಜ್ಞಾನ ಕುಂಠಿತ ಮೂರು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಕೇಂದ್ರ ಆಹಾರ ಸಚಿವ ಶ್ರೀ ಜಗಜೀವನರಾಂ ಅವರು ‘ಕೃತಕ ಗೊಬ್ಬರದ ಕಡಿಮೆ ಬಳಕೆಯು ಆತಂಕ ಉಂಟು ಮಾಡಿದೆ. ಕಡಿಮೆ ಬಳಕೆಗೆ ಕಾರಣವೇನೆಂಬುದನ್ನು ಪರಿಶೀಲಿಸುವಂತೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ’ ಎಂದರು.

ಪ್ರೇಮದೃಶ್ಯ: ಸಹಜತೆಗೆ ಯುವಕರ ಅಪೇಕ್ಷೆ

ನವದೆಹಲಿ, ಡಿ. 14– ಪ್ರೇಮದ ದೃಶ್ಯಗಳನ್ನು ಚಲನಚಿತ್ರದಲ್ಲಿ ಸಹಜ ಹಾಗೂ ನೇರವಾಗಿ ಚಿತ್ರಿಸಬೇಕೆ ಅಥವಾ ಸಾಂಕೇತಿಕವಾಗಿ ಅಭಿನಯದಿಂದ, ಮಾತುಗಳಿಂದ ಮತ್ತು ದೃಶ್ಯಗಳಿಂದ ಚಿತ್ರಿಸಬೇಕೆ?

ಈ ಪ್ರೇಮ ದೃಶ್ಯದ ವಿಷಯದಲ್ಲಿ ದೆಹಲಿ ವಯಸ್ಕರು ವಿರೋಧಿಸಿದರೆ, ಯುವಕರು ಪ್ರೇಮ ದೃಶ್ಯಗಳನ್ನು ಸಹಜವಾಗಿ ಚಿತ್ರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ಸಮಾಚಾರ ಸಂಪರ್ಕ ಕುರಿತ ಭಾರತೀಯ ಸಂಸ್ಥೆಯಿಂದ ಮಾದರಿ ಸಮೀಕ್ಷೆಯಿಂದ ಈ ಅಂಶ ವ್ಯಕ್ತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.