ರಂಗಭೂಮಿ ಇತಿಹಾಸ ದಾಖಲೆಗೆ ಕಾರಂತ ಕರೆ
ಬೆಂಗಳೂರು, ಫೆ. 21– ರಂಗಭೂಮಿ ಹಾಗೂ ರಂಗ ಪರಂಪರೆಯ ಉಳಿವಿಗೆ ಅವುಗಳು ನಡೆದು ಬಂದ ದಾರಿಯನ್ನು ದಾಖಲಿಸುವುದು ಇಂದಿನ ಸಾಂಸ್ಕೃತಿಕ ಅಗತ್ಯಗಳಲ್ಲಿ ಒಂದು ಎಂದು ಖ್ಯಾತ ರಂಗತಜ್ಞ ಬಿ.ವಿ.ಕಾರಂತರು ಇಂದು ಇಲ್ಲಿ ಅಭಿಪ್ರಾಯಪಟ್ಟರು.
ಎಡಿಎ ರಂಗಮಂದಿರದಲ್ಲಿ ‘ರಂಗ ಸಂಪದ’ ಏರ್ಪಡಿಸಿದ್ದ ‘ರಂಗವಿಹಂಗಮ ಪುರಸ್ಕಾರ’ ಸಮಾರಂಭದಲ್ಲಿ ರಂಗಭೂಮಿಯ ದಿಗ್ಗಜರುಗಳಾದ ಜಿ.ವಿ.ಅಯ್ಯರ್, ಏಣಗಿ ಬಾಳಪ್ಪ ಹಾಗೂ ಮುದೇನೂರು ಸಂಗಣ್ಣ ಅವರನ್ನು ಗೌರವಿಸಿ ಮಾತನಾಡಿದ ಅವರು, ರಂಗಭೂಮಿ ಒಂದು ನಿರಂತರ ಪಯಣ. ಈ ಪ್ರಯಾಣದ ಹಂತಗಳನ್ನು ದಾಖಲಿಸದಿದ್ದರೆ ಅದರ ಬೆಳಕಿನಲ್ಲಿ ಹೊಸತಿನ ಸೃಷ್ಟಿ ಅಸಾಧ್ಯ ಎಂದು ಹೇಳಿದರು.
ಹವಾಲಾ: ಕೋರ್ಟಿಗೆ ಇಂದು ಸಿಬಿಐ ವರದಿ
ನವದೆಹಲಿ, ಫೆ. 21 (ಯುಎನ್ಐ)– ಹವಾಲಾ ಹಗರಣದ ಸಂಬಂಧ ಜೈನ್ ಡೈರಿಯಲ್ಲಿ ಉಲ್ಲೇಖಿತ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಪಾತ್ರದ ಕುರಿತಾಗಿ ತನಿಖೆ ನಡೆಸಿದ ಸಿಬಿಐ, ನಾಳೆ ತನಿಖೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟಿಗೆ ತಿಳಿಸಲಿದೆ. ಈ ಮಧ್ಯೆ ನಗರಾಭಿವೃದ್ಧಿ ರಾಜ್ಯ ಸಚಿವ ಆರ್.ಕೆ.ಧವನ್, ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರಿಂದ, ರಾಜೀನಾಮೆ ನೀಡಿದ ಕೇಂದ್ರ ಸಚಿವರ ಸಂಖ್ಯೆ ಏಳಕ್ಕೆ ಏರಿದೆ. ಧವನ್ ವಿರುದ್ಧ ಸಿಬಿಐ ನಾಳೆ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.