ವಾರಾಣಸಿ ಬಳಿ ರೈಲು ಉರುಳಿ 52 ಜನರ ಸಾವು
ನವದೆಹಲಿ ಜೂನ್ 21– ಅಲಹಾಬಾದ್– ಗೋರಖಪುರ ಎಕ್ಸ್ಪ್ರೆಸ್ ರೈಲು ಶನಿವಾರ ಬೆಳಗಿನ ಜಾವ ವಾರಾಣಸಿಯಿಂದ ಎಪ್ಪತ್ತು ಕಿಲೊ ಮೀಟರ್ ದೂರದಲ್ಲಿ ಕಂಬಿ ತಪ್ಪಿ ಐವತ್ತೆರಡು ಜನರು ಸತ್ತು ನೂರೈವತ್ತು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆಯೆಂದು ರೈಲ್ವೆ ಬೋರ್ಡಿಗೆ ಬಂದಿರುವ ವರದಿಗಳು ಹೇಳಿವೆ.
ಸೇತುವೆ ಮೇಲೆ ಹೋಗುತ್ತಿದ್ದಾಗ ರೈಲಿನ ಹತ್ತು ಬೋಗಿಗಳಲ್ಲಿ ಕಂಬಿ ತಪ್ಪಿದ ಐದು ಬೋಗಿಗಳು ಮಗುಚಿಕೊಂಡವೆಂದು ಗೊತ್ತಾಗಿದೆ. ಗಾಯಗೊಂಡವರಲ್ಲಿ 60 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಐ.ಎ.ಎಸ್ ಪರೀಕ್ಷೆ: ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶ
ಮೈಸೂರು, ಜೂನ್ 21– ಐ.ಎ.ಎಸ್ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಹುದ್ದೆಗಳ ಬಗ್ಗೆ ನಡೆಯುವ ಪರೀಕ್ಷೆಗಳಲ್ಲಿ ಕೆಲವು ಪ್ರಶ್ನೆ ಪತ್ರಿಕೆಗಳಿಗೆ ಕನ್ನಡ ಭಾಷೆಯಲ್ಲಿ ಉತ್ತರ ಬರೆಯುವುದಕ್ಕೆ ಅಭ್ಯರ್ಥಿಗಳಿಗೆ ಈ ವರ್ಷದಿಂದ ಅವಕಾಶ ನೀಡಲು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್ ನಿರ್ಧರಿಸಿದೆಯೆಂದು ಗೊತ್ತಾಗಿದೆ.
ಕಡ್ಡಾಯವಾಗಿ ಉತ್ತರ ಬರೆಯಬೇಕಾದ ಮೂರು ಪ್ರಶ್ನೆ ಪತ್ರಿಕೆಗಳಲ್ಲಿ ಅವು ಇಂಗ್ಲಿಷಿನಲ್ಲಿದ್ದಾಗ್ಯೂ, ‘ಜನರಲ್ ನಾಲೆಜ್’ ಮತ್ತು ‘ಎಸ್ಸೆ’ ಪ್ರಶ್ನೆ ಪತ್ರಿಕೆಗಳಿಗೆ ಉತ್ತರವನ್ನು ಕನ್ನಡದಲ್ಲಿ ಬರೆಯಬಹುದು.
ಈ ವರ್ಷದಿಂದ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ನೀಡಲಾಗುವುದೆಂದೂ ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.