ವಿಧಾನಸಭೆ ಸಚಿವಾಲಯದಲ್ಲಿ ಅಗತ್ಯವಿಲ್ಲದಿದ್ದರೂ ತರಾತುರಿಯಲ್ಲಿ ವಿವಿಧ ಹುದ್ದೆಗಳಿಗೆ ಅಕ್ರಮವಾಗಿ ನೇಮಕಾತಿ ನಡೆದಿರುವ ವಿಚಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ. ಒಟ್ಟು 90 ಹುದ್ದೆಗಳಿಗೆ ಅರ್ಜಿ ಕರೆದು, 151 ಮಂದಿಯನ್ನು ಆಗಲೇ ನೇಮಕ ಮಾಡಿಕೊಂಡು, ಇನ್ನೂ 80 ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆಸಿರುವ ಬಗ್ಗೆ ವರದಿಯಾಗಿದೆ.
ನೇಮಕಾತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಮುಖ್ಯಮಂತ್ರಿ, ಸ್ಪೀಕರ್, ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಮುಖ್ಯ ಸಚೇತಕರು ತಮ್ಮ ಕ್ಷೇತ್ರದವರಿಗೇ ಉದ್ಯೋಗ ಕೊಟ್ಟಿರುವುದನ್ನು ನೋಡಿದರೆ, ಅಕ್ರಮ ಕಣ್ಣಿಗೆ ರಾಚುತ್ತದೆ. ಹೆಸರಿಗೆ ಮಾತ್ರ ನೇಮಕಾತಿ ಸಮಿತಿ ರಚಿಸಿ, ಸಂದರ್ಶನ ನಡೆಸುವ ನಾಟಕವಾಡಿ ತಮ್ಮವರಿಗೆಲ್ಲಾ ‘ಉದ್ಯೋಗ ಭಾಗ್ಯ’ ನೀಡಿದ್ದಾರೆ.
ಚುನಾವಣೆಗೆ ಮುನ್ನ ಇಂಥ ಅಕ್ರಮ ನೇಮಕಾತಿ ನಡೆಸಿರುವುದು ನಾಚಿಕೆಗೇಡಿನ ನಡೆ. ಅಕ್ರಮ ಮತ್ತು ಸ್ವಜನಪಕ್ಷಪಾತದ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯ ಉತ್ತರ ನೀಡಿರುವುದನ್ನು ನೋಡಿದರೆ ತಾವು ಪ್ರಶ್ನಾತೀತರೆಂದು ಅವರು ಭಾವಿಸಿದಂತಿದೆ. ಇದು ಮುಖ್ಯಮಂತ್ರಿಗೆ ಶೋಭೆಯಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.