ಕಾಂಗ್ರೆಸ್ ನಾಯಕಿ, ನಟಿ ರಮ್ಯಾ ಹಾಗೂ ‘ಜಸ್ಟ್ ಆಸ್ಕಿಂಗ್’ ಖ್ಯಾತಿಯ ನಟ ಪ್ರಕಾಶ್ ರೈ ಅವರು ಮೇ 12ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ ಎಂಬ ಸುದ್ದಿ ಓದಿ ‘ದೀಪದ ಬುಡವೇ ಕತ್ತಲು’ ಎಂಬ ನಾಣ್ನುಡಿ ನೆನಪಿಗೆ ಬಂತು.
ಯಾವುದೇ ಗೊಂದಲಗಳಿಲ್ಲದಂತೆ ಚುನಾವಣೆಗಳು ನಡೆಯಬೇಕು ಎಂಬ ಕಾರಣಕ್ಕೆ ಚುನಾವಣಾ ಆಯೋಗ ಮೊದಲೇ ಸಾಕಷ್ಟು ತಯಾರಿ ನಡೆಸಿತ್ತು. ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಜಾಗೃತಿ ಅಭಿಯಾನಗಳನ್ನೂ ನಡೆಸಲಾಗಿತ್ತು. ಆದರೆ ಈ ‘ಸುಶಿಕ್ಷಿತ, ಘನತೆವೆತ್ತವರು’ ಮತದಾನ ಮಾಡದೆ ಬೇಜವಾಬ್ದಾರಿ ತೋರಿದ್ದಾರೆ.
ವಯಸ್ಸಾದವರು, ಅಂಗವಿಕಲರು, ದೂರದ ಊರುಗಳಿಂದ ಬಂದವರು, ಮತದಾನದ ದಿನವೇ ಮದುವೆಯಾದವರು... ಹೀಗೆ ಎಲ್ಲರೂ ಮತ ಚಲಾಯಿಸಿದ್ದನ್ನು ನೋಡಿದ್ದೇವೆ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಇಬ್ಬರು ಹೀಗೆ ಬೇಜವಾಬ್ದಾರಿತನ ತೋರಬಹುದೇ? ಮತದಾನ ಮಾಡದೆಯೇ ಯಾವ ನೈತಿಕತೆಯಿಂದ ಇವರು ಮುಂದಿನ ಸರ್ಕಾರವನ್ನು ಪ್ರಶ್ನಿಸುತ್ತಾರೆ? ನಾಲ್ಕು ಜನರಿಗೆ ಮಾದರಿಯಾಗಬೇಕಾದವರೇ ಹೀಗೆ ಮಾಡುವುದು ಎಷ್ಟು ಸರಿ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.