ಕಲಿಕಾ ಮಾಧ್ಯಮ ಕುರಿತ ತೀರ್ಪು, ರಾಜ್ಯ ಪುನರ್ವಿಂಗಡನೆಯ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಿದೆ. ಈ ನಾಡಿನ ಸಂಸ್ಕೃತಿ, ಪರಂಪರೆ, ಸ್ವಂತಿಕೆಗಳ ಮೇಲೆ ಆಗುವ ಗಂಭೀರ ಪರಿಣಾಮಗಳನ್ನು ತೀರ್ಪು ಅಲಕ್ಷಿಸಿದೆಯಲ್ಲದೆ, ಇದು ಮಗುವಿನ ಸಹಜ ಸೃಜನಾತ್ಮಕತೆಯನ್ನು ಅಳಿಸಿಹಾಕುತ್ತದೆ ಎನ್ನುವುದನ್ನು ತೀರ್ಪು ಕಡೆಗಣಿಸಿದೆ.
ಶಿಕ್ಷಣ ತಜ್ಞರನ್ನು ಹೊರಗಿಟ್ಟು, ಕೇವಲ ಕಾನೂನು ತಜ್ಞರು ಹೊರತಂದ ಅವೈಜ್ಞಾನಿಕ ಮತ್ತು ಅಪರಿಪೂರ್ಣ ತೀರ್ಪು ಇದು. ತೀರ್ಪಿತ್ತ ನ್ಯಾಯಮೂರ್ತಿಗಳೇ ಆಗಲಿ, ಅವರೆದುರು ವಿಷಯ ಮಂಡಿಸಿದ ವಕೀಲರೇ ಆಗಲಿ ಶಿಕ್ಷಣ ತಜ್ಞರಲ್ಲ. ಇಂದಿನ ಮತ್ತು ಮುಂದಿನ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ ಇಂಥ ವಿಷಯಗಳಲ್ಲಿ ಜವಾಬ್ದಾರಿ ಶಿಕ್ಷಣ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಬೇಕು. ಆದ್ದರಿಂದ, ದೇಶದ ಶಿಕ್ಷಣ ತಜ್ಞರ ಒಂದು ತಂಡವನ್ನು ರಚಿಸಿ, ಅವರ ಅಭಿಪ್ರಾಯಗಳನ್ನು ಪಡೆದು, ಆ ನಂತರ ತಮ್ಮ ತೀರ್ಪನ್ನು ನೀಡುವಂತೆ ಕೋರುವ ಒಂದು ಮಧ್ಯಂತರ ಅರ್ಜಿಯನ್ನು ಪುನರ್ ಪರಿಶೀಲನಾ ಅರ್ಜಿಯೊಂದಿಗೆ ಸಲ್ಲಿಸಬೇಕು.
ತಮಗೆ ಸ್ವತಃ ಗೊತ್ತಿಲ್ಲದ ಇಂಥ ಎಷ್ಟೋ ತಾಂತ್ರಿಕ ಹಾಗೂ ವೈಜ್ಞಾನಿಕ ವಿಷಯಗಳಲ್ಲಿ ನ್ಯಾಯಾಲಯಗಳು ತಜ್ಞರ ಅಭಿಪ್ರಾಯವನ್ನು ಪಡೆದು ಅದನ್ನು ಪರಿಗಣಿಸಿ, ಕೊನೆಗೆ ತಮ್ಮ ತೀರ್ಪು ಕೊಟ್ಟದ್ದುಂಟು. ಕಾನೂನಿನಲ್ಲಿ ಇಂಥ ಅವಕಾಶವಿದೆ. ‘ಎಲ್ಲ ಬಲ್ಲವರಿಲ್ಲ’ ಎನ್ನುವ ಸರ್ವಜ್ಞನ ಮಾತಿನ ಸತ್ಯತೆಯನ್ನು ನ್ಯಾಯಮೂರ್ತಿಗಳೂ ಅರ್ಥ ಮಾಡಿಕೊಳ್ಳಬೇಕು.
ಕಾನೂನು ತಜ್ಞರ ಅಭಿಪ್ರಾಯ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಭಿನ್ನವಾದರೆ, ಯಾರ ಅಭಿಪ್ರಾಯಕ್ಕೆ ಮನ್ನಣೆ ಸಿಗಬೇಕೆನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟದ್ದೇನಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕಾಗುತ್ತದೆ. ಆ ಅಭಿಪ್ರಾಯವನ್ನು ಈಗಿರುವ ಸಂವಿಧಾನದ ಚೌಕಟ್ಟಿನಲ್ಲಿ ಅಳವಡಿಸುವುದು ಸಾಧ್ಯವೇ ಎಂದು ಕಾನೂನು ತಜ್ಞರು ಆಲೋಚಿಸಬೇಕು. ಅದು ಸಾಧ್ಯವೇ ಇಲ್ಲಾ ಎಂದಾದರೆ ಚೌಕಟ್ಟನ್ನು ಬಗ್ಗಿಸಬೇಕು ಇಲ್ಲವೇ ಹಿಗ್ಗಿಸಬೇಕು. ಸಂವಿಧಾನವು ನಮಗಾಗಿ ಇದೆ. ನಾವು ಸಂವಿಧಾನಕ್ಕಾಗಿ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.