ADVERTISEMENT

ಅಲೋಪತಿಗಿಂತ ಹೇಗೆ ಉತ್ತಮ?

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ನಾಗೇಶ ಹೆಗಡೆ ಅವರ ಲೇಖನಕ್ಕೆ ‘ಆಯುರ್ವೇದವನ್ನು ಶಂಕಿಸುವುದೇಕೆ?’  (ವಾವಾ ಫೆ 11) ಎಂಬ ಡಾ. ಎಂ.ಎಸ್. ಅವಧಾನಿ  ಅವರ ಬರಹಕ್ಕೆ ಪ್ರತಿಕ್ರಿಯೆ. ರಸೌಷಧಿಗಳಲ್ಲಿ ಸೀಸ, ಪಾದರಸ ಮತ್ತು ಆರ್ಸೆನಿಕ್ ಮುಂತಾದ ಲೋಹಗಳ ವಿಷಾಂಶಗಳನ್ನು ಶೋಧನೆ ಮೂಲಕ ನಿವಾರಿಸಬಹುದೆಂದಿದ್ದಾರೆ. ಆದರೆ  ಸೀಸ, ಪಾದರಸ ಮತ್ತು ಆರ್ಸೆನಿಕ್ ಮುಂತಾದ ಲೋಹಗಳು ಸೇರಿದಂತೆ ಯಾವುದೇ ಮೂಲವಸ್ತುವಿನ ರಾಸಾಯನಿಕ ಗುಣವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ವಿಜ್ಞಾನ ಹೇಳುತ್ತದೆ.

ಆ ಲೋಹಗಳನ್ನು ಅಣು ಬೈಜಿಕ ವಿಧಾನದಿಂದ ಬೇರೆ ಲೋಹಗಳಾಗಿ ಮಾರ್ಪಡಿಸಿದರೆ ಗುಣ ಬದಲಾವಣೆ ಆಗುತ್ತದೆ. ಆಯುರ್ವೇದದ ಶೋಧನ ಕ್ರಮಗಳು ಇದನ್ನು ಮಾಡುವ ಸಾಧ್ಯತೆ ಇಲ್ಲ. ಈ ಲೋಹಗಳು ಎಲ್ಲ ಮನುಷ್ಯರಿಗೂ ವಿಷಕಾರಕ, ದೇಹ ಪ್ರಕೃತಿಗೂ ಲೋಹಗಳ ವಿಷಾಂಶಕ್ಕೂ ಯಾವುದೇ ಸಂಬಂಧ ಇಲ್ಲ.

ವಿಜ್ಞಾನ ಒಂದು ದಿನ ಹುಟ್ಟಿರುವಂತದ್ದಲ್ಲ. ಸತತ ಪ್ರಯೋಗಗಳಿಂದ ನಿರೂಪಿತವಾದದ್ದು. ಆಯುರ್ವೇದದಲ್ಲಿರುವ ಪ್ರಯೋಗಗಳಿಂದ ನಿರೂಪಿತವಾದ ಸತ್ಯಗಳು ವಿಜ್ಞಾನದ ಭಾಗವೇ ಆಗಿರುತ್ತವೆ. ಯಾವುದೋ ತಿಥಿಯಂದು ಸ್ವರ್ಣಪ್ರಾಶನದಿಂದ ಮಕ್ಕಳ ಬುದ್ಧಿ ಬೆಳವಣಿಗೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎಂಬ ಪುರಾವೆಯಿಲ್ಲದೆ ಔಷಧವನ್ನು ಕೇವಲ ಹಣಮಾಡುವ ಉದ್ದೇಶದಿಂದ ಪೋಷಿಸಿದರೆ ಆಯುರ್ವೇದವನ್ನು ದೂಷಿಸಬೇಕಾಗುತ್ತದೆ.  ಋಷಿ ಪ್ರಣೀತವಾದ ಮಾತ್ರಕ್ಕೆ     ಆಯುರ್ವೇದಕ್ಕೆ ವಿಶೇಷ ಸ್ಥಾನ ಲಭಿಸಬೇಕಾದ್ದಿಲ್ಲ. ಯಾವ ರೀತಿಯಲ್ಲಿ ಅಲೋಪತಿಗಿಂತ ಉತ್ತಮ ಎಂಬ ಅಂಶದ ಮೇಲೆ ಆಯುರ್ವೇದದ ಸ್ಥಾನ ನಿರ್ಧಾರ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.