ಕೋಬ್ರಾಪೋಸ್ಟ್ ಅಂತರ್ಜಾಲ ತಾಣ ನಡೆಸಿದ ಆಪರೇಶನ್ ರೆಡ್ ಸ್ಪೈಡರ್ ಎಂಬ ಗುಪ್ತ ಕಾರ್ಯಾಚರಣೆಯಿಂದ ದೊರೆತ ಮಾಹಿತಿ ನಿಜಕ್ಕೂ ಸ್ಫೋಟಕವಾದುದು. ನಮ್ಮ ದೇಶದ ಇಡೀ ಆರ್ಥಿಕತೆಗೆ ಬ್ಯಾಂಕುಗಳ ಭ್ರಷ್ಟ ಅಧಿಕಾರಿಗಳು ಎಷ್ಟೊಂದು ಹಾನಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದಾಗ ನಡುಕ ಹುಟ್ಟುತ್ತದೆ.
ವಿಚಿತ್ರವೆಂದರೆ ಮಾಧ್ಯಮದವರು ಇಷ್ಟೊಂದು ಪ್ರಮುಖ ಸ್ಫೋಟಕ ಸುದ್ದಿಯನ್ನು ಬದಿಗೆ ಸರಿಸಿ ಕೇವಲ ಐಪಿಎಲ್ ಸ್ಪಾಟ್ ಫಿಕ್ಸಿಂಗಿಗೆ ವಿನಾಕಾರಣ ಆದ್ಯತೆ ಕೊಟ್ಟು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ.
ಐಪಿಎಲ್ ಮನೋರಂಜನೆ ಹಾಗೂ ಗ್ಲಾಮರ್ಗೆ ಸಂಬಂಧಪಟ್ಟಿರುವುದರಿಂದ ಮಾಧ್ಯಮದವರು ಈ ಗ್ಲಾಮರ್ನ ಬೆನ್ನು ಬಿದ್ದು ಐಪಿಎಲ್ನ್ನು ವೈಭವೀಕರಿಸಿ ದೇಶದ ಆರ್ಥಿಕತೆಗೆ ನಿಜವಾಗಿ ಅಪಾಯವುಂಟು ಮಾಡುವ ಬ್ಯಾಂಕುಗಳ ಅವ್ಯವಹಾರವನ್ನು ಬಯಲಿಗೆಳೆದ ಕೋಬ್ರಾಪೋಸ್ಟ್ನ್ನು ಕಡೆಗಣಿಸಿ ದೊಡ್ಡ ತಪ್ಪು ಮಾಡುತ್ತಿದ್ದಾರೆ.
ಐಪಿಎಲ್ ಸ್ಪಾಟ್ಫಿಕ್ಸಿಂಗಿನಿಂದ ಕೇವಲ ಧನಿಕರಿಗೆ ಹಾಗೂ ಕ್ರಿಕೆಟಿನ ಹುಚ್ಚಿರುವವರಿಗೆ ಸ್ವಲ್ಪ ನಷ್ಟವಾಗಿರಬಹುದು ಅಷ್ಟೇ. ಅದರಿಂದ ಸಮಸ್ತ ದೇಶದ ಆರ್ಥಿಕತೆಯ ಅಡಿಪಾಯಕ್ಕೆ ಸ್ವಲ್ಪವೂ ಅಪಾಯವಿಲ್ಲ. ಆದರೂ ಈ ಐಪಿಎಲ್ ಸ್ಪಾಟ್ ಫಿಕ್ಸಿಂಗಿನಿಂದ ಇಡೀ ದೇಶವೇ ಮುಳುಗಿ ಹೋಯಿತು ಹಾಗೂ ದೇಶದ ಬಡವರೆಲ್ಲ ಹೊಟ್ಟೆಗಿಲ್ಲದೆ ಸತ್ತೇ ಹೋಗುತ್ತಿದ್ದಾರೆ ಎನ್ನುವ ರೀತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಇಡೀ ದೇಶದ ಮಾಧ್ಯಮಗಳು ಬೊಬ್ಬೆ ಹಾಕಿದ್ದು ಹಾಗೂ ಜನರು ಸನ್ನಿ ಹಿಡಿದವರಂತೆ ವರ್ತಿಸಿದ್ದು ತುಂಬಾ ಜುಗುಪ್ಸೆ ಹುಟ್ಟಿಸುತ್ತಿದೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.