‘ಎರಡು ವರ್ಷವಾದರೂ ಇನ್ನೂ ಕನ್ನಡ ಕಲಿತಿಲ್ಲವೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗದಗ ಭೆಟ್ಟಿಯ ಕಾಲಕ್ಕೆ ಅಲ್ಲಿರುವ ರಾಜಸ್ತಾನ ಮೂಲದ ಐಎಫ್ಎಸ್ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದರೆಂದು ವರದಿಯಾಗಿದೆ (ಪ್ರ.ವಾ., ಏ. 28). ಸಿದ್ದರಾಮಯ್ಯ ಅವರು ಹೀಗೆ ಕೇಳಿದ್ದು ಮೆಚ್ಚತಕ್ಕದ್ದೆ. ಅವರಲ್ಲಿ ಸುಪ್ತವಾಗಿರುವ ಕನ್ನಡದ ಬಗೆಗಿನ ಕಳಕಳಿ ಯಾವಾಗಲಾದರೊಮ್ಮೆ ಈ ರೀತಿ ಹೊರಸೂಸುವಂತೆ ತೋರುತ್ತದೆ!
ಆದರೆ ಅವರು ನಾಡು, ನುಡಿ ಹಾಗೂ ಗಡಿಯ ಸಂರಕ್ಷಣೆ ಹೊತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದತ್ತ ಸ್ವಲ್ಪ ಇಣುಕಿ ನೋಡಬೇಕು. ಯಾವ ಉದ್ದೇಶಗಳಿಂದ ಸ್ಥಾಪಿಸಲಾಗಿದೆಯೊ ಆ ಉದ್ದೇಶಗಳತ್ತ ಈ ಸಂಸ್ಥೆಗಳು ಸಾಗಿವೆಯೇ ಎಂಬುದನ್ನು ಅವಲೋಕಿಸಬೇಕು. ಇದೇ ಸಿದ್ದರಾಮಯ್ಯ ಅವರು ರಾಜ್ಯದ ಮೊಟ್ಟ ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರು.
ಆಗಿನಿಂದಲೂ ಈ ಪ್ರಾಧಿಕಾರಗಳಿಗೆ ಕನ್ನಡಪರ ಚಿಂತಕರು ಮತ್ತು ಹೋರಾಟಗಾರರನ್ನೇ ನಾಮಕರಣ ಮಾಡುತ್ತ ಬರಲಾಗಿದೆ. ಆದರೆ ಈ ಬಾರಿ ಪಕ್ಕಾ ಕಾಂಗ್ರೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನಾಮಕರಣ ಮಾಡಲಾಗಿದ್ದು ಈ ಸಂಸ್ಥೆಗಳ ಘನತೆಗೆ ಪೆಟ್ಟು ಬಿದ್ದಂತಾಗಿದೆ. ಈ ಕೂಡಲೇ ನಾಮಕರಣಗಳನ್ನು ರದ್ದುಗೊಳಿಸಿ ಕನ್ನಡಪರ ಚಿಂತಕರು ಮತ್ತು ಹೋರಾಟಗಾರರನ್ನು ನೇಮಿಸುವ ಮೂಲಕ ಮುಖ್ಯಮಂತ್ರಿಗಳು ತಮಗಿರುವ ಕನ್ನಡದ ಬಗೆಗಿನ ಬದ್ಧತೆಯನ್ನು ಪ್ರದರ್ಶಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.