ADVERTISEMENT

ಉತ್ಸವಗಳ ದುಂದುವೆಚ್ಚ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ರಾಜ್ಯ ಸರ್ಕಾರ ಗತ-ಇತಿಹಾಸ ಸಾರುವ, ಹಿಂದಿನ ಸಾಮ್ರಾಜ್ಯ- ರಾಜ್ಯಗಳಾದ ಹಂಪಿ, ನವರಸಪುರ, ಕಿತ್ತೂರು-ಚಿತ್ರದುರ್ಗ, ಕರಾವಳಿ ಉತ್ಸವ ಆಚರಿಸಲು ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಈ ಉತ್ಸವದ ಮುಂದಾಳುತನ ವಹಿಸುವವರು, ಹಳೆಯ ಅರಮನೆ, ಕೋಟೆ ಕೊತ್ತಲಗಳಿಗೆ ವಿದ್ಯುತ್ ಅಲಂಕಾರ ಮಾಡಿ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಮಾಡಿ ಕೈ ತೊಳೆದುಕೊಳ್ಳುತ್ತಾರೆ.

ಇದರಿಂದ ರಾಜ್ಯದ ಪ್ರಜೆಗಳಿಗೆ ಆಗುವ ಅನುಕೂಲವೇನು? ಇಂದು ಅನೇಕ ಜಿಲ್ಲಾ ಕೇಂದ್ರಗಳಿಂದ ಗ್ರಾಮಗಳಿಗೆ ಹೋಗಲು ಕನಿಷ್ಠ ರಸ್ತೆ ಸೌಲಭ್ಯ ಇಲ್ಲ. ರಸ್ತೆಗಳಂತೂ ತಗ್ಗುದಿಣ್ಣೆಗಳಿಂದ ಕೂಡಿ ಅಪಘಾತ, ಮಡಿದವರ ಸುದ್ದಿ ಓದುತ್ತೇವೆ. ಕೆಟ್ಟ ರಸ್ತೆಗಳಿಂದಾಗಿ ದಿನನಿತ್ಯ ಟ್ರಕ್‌ಗಳು, ಟಂ ಟಂ ಮತ್ತು ಜೀಪುಗಳು ಕೆಟ್ಟು ನಿಂತಿರುತ್ತವೆ. ಅಥವಾ ಅಪಘಾತವಾಗಿರುತ್ತವೆ. ಈ ರಸ್ತೆಗಳನ್ನು ನೋಡಿದರೆ ಲೋಕೋಪಯೋಗಿ ಇಲಾಖೆ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವಂತಾಗಿದೆ.

 ಹಳ್ಳಿಗಳಲ್ಲಿನ ಅನೇಕ ಶಾಲೆಗಳಲ್ಲಿ ಸರಿಯಾಗಿ ಕೊಠಡಿಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಹೆಣ್ಣು ಮಕ್ಕಳಿಗೆ  ಶೌಚಾಲಯಗಳಿಲ್ಲ. ಆದ್ದರಿಂದ ಉತ್ಸವಗಳಿಗೆ ನೀಡುವ ಆದ್ಯತೆಯನ್ನು ಕಡಿಮೆ ಮಾಡಿ ಸರ್ಕಾರ ಜೀವಂತ ಸಮಸ್ಯೆಗಳತ್ತ ಗಮನಹರಿಸಲಿ. ಮುಖ್ಯ ಮಂತ್ರಿಗಳು ಒಮ್ಮೆ ರಸ್ತೆ ದುರವಸ್ಥೆ ಅರಿಯಬೇಕಾದರೆ ಅವರು ಹೆಲಿಕಾಪ್ಟರ್‌ನಲ್ಲಿ ಸುತ್ತುವುದನ್ನು ಬಿಟ್ಟು ರಸ್ತೆಗಳಲ್ಲಿ ಓಡಾಡಲಿ. ಆಗ ನಿಜವಾದ ರಾಜ್ಯದ ಸ್ಥಿತಿಗತಿ ಅರ್ಥವಾದೀತು.

ಸರ್ಕಾರ ಇನ್ನಾದರೂ ಮಠ ಮಾನ್ಯಗಳಿಗೆ ಕೋಟ್ಯಂತರ ರೂಪಾಯಿಯನ್ನು ನೀಡುವ ಬದಲು  ಮೂಲಭೂತ ಸೌಲಭ್ಯಗಳ ಕಡೆ ಗಮನಹರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.