ADVERTISEMENT

ಉದ್ಧಟತನದ ಪರಮಾವಧಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಸರ್ಕಾರಿ ಶಾಲಾ ಮಕ್ಕಳು ನಕ್ಸಲ್‌ಗಳಾಗುತ್ತಾರೆ, ಅವರ ಸಮಸ್ಯೆಗಳಿಗೆ ಅವರೇ ಕಾರಣ. ಶಿಕ್ಷಣ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ವಹಿಸಬೇಕೆನ್ನುವ ಶ್ರೀಶ್ರೀ ರವಿಶಂಕರ ಗುರೂಜಿಯವರ ಮಾತುಗಳು ಅವರ ಅಪ್ರಬುದ್ಧತನ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳನ್ನು ಅವಹೇಳನ ಮಾಡುವ ಉದ್ಧಟತನದ ಮನಃಸ್ಥಿತಿಯ ಪ್ರತೀಕ. ಅವರ ಚಿಂತನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಮಾತ್ರವೇ ಪ್ರತಿ ಮನೆಯ ಬಾಗಿಲನ್ನು ತಟ್ಟಲು ಸಾಧ್ಯ. ಜಾತಿ ಮತ್ತು ವರ್ಗ ತಾರತಮ್ಯ ಮಾಡದೆ ಎಲ್ಲಾ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವ ಶಕ್ತಿ ಸಾಮರ್ಥ್ಯ ಇರುವುದು ಸರ್ಕಾರಕ್ಕೆ. ಗುಡ್ಡಗಾಡು, ಹಾಡಿ, ತಾಂಡ, ಹಟ್ಟಿ, ಪಟ್ಟಣ, ಮಹಾ ನಗರಗಳ ಮಕ್ಕಳೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಾರೆ ಎಂಬುದನ್ನು ಮರೆಯಬಾರದು.

ಓದುವ ಮಕ್ಕಳಿಗೆ ಅದು ಸರ್ಕಾರಿ ಅಥವಾ ಖಾಸಗಿ ಎಂಬ ತಾರತಮ್ಯ ಗೊತ್ತಿರುವುದಿಲ್ಲ.  ಮೌಲ್ಯಗಳ ಅಧಃಪತನಕ್ಕೆ ಸರ್ಕಾರಿ ಶಾಲೆಗಳು ಕಾರಣ ಅಲ್ಲ. ಖಾಸಗಿ ಶಾಲೆಯಲ್ಲಿ ಎಲ್ಲ ರೀತಿಯಲ್ಲೂ ಉತ್ಕೃಷ್ಟ ಎಂಬ ಭಾವನೆ ಗುರೂಜಿಗೆ ಅವರಿಗೆ ಹೇಗೆ ಬಂತೋ? ಅಥವಾ ಅದು ಅವರ ಹೈ ಫೈ ಭಕ್ತರ ಅಭಿಪ್ರಾಯವೋ.

ಈ ರಾಷ್ಟ್ರಕ್ಕೆ ನಿಷ್ಠೆ ಮತ್ತು ಉತ್ತಮ ಸೇವೆ ಒದಗಿಸುತ್ತಿರುವ ವಿದ್ಯಾವಂತರನ್ನು ಲೆಕ್ಕಹಾಕಿದರೆ ಅವರ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಮೊದಲ ಸಾಲಿನಲ್ಲಿರುತ್ತಾರೆ ಎಂಬುದನ್ನು ಗುರೂಜಿ ಅರ್ಥ ಮಾಡಿಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.