‘ಆರು ತಿಂಗಳು ಆತ್ಮಹತ್ಯೆ ಮುಂದೂಡಿ’ ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ರೈತರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಹೇಳಿಕೆಯ ಅಸಲಿ ಉದ್ದೇಶವೇನು?
‘ಮುಂದಿನ ಅವಧಿಗೆ ನಮ್ಮ ಪಕ್ಷವೇ ಸರ್ಕಾರ ರಚಿಸಲಿದ್ದು, ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು’ ಎಂಬ ಆಶ್ವಾಸನೆಯನ್ನು ಕುಮಾರಸ್ವಾಮಿ ಬೆಳಗಾವಿಯಲ್ಲಿ ನೀಡಿದ್ದಾರೆ.
ರೈತರ ಎಲ್ಲಾ ಸಮಸ್ಯೆಗಳಿಗೂ ಸಾಲ ಮನ್ನಾ ಪರಿಹಾರವೇ? 2007 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ರೈತರ ಸ್ವಲ್ಪ ಪ್ರಮಾಣದ ಸಾಲ ಮನ್ನಾ ಮಾಡಿದ್ದರು, ಆ ಸಾಲ ಮನ್ನಾದಿಂದ ರೈತರ ಬದುಕು ಹಸನಾಯಿತೇ? ರೈತರ ಆತ್ಮಹತ್ಯಾ ಸರಣಿ ಇಂದಿಗೂ ಮುಂದುವರಿದಿವೆ. ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡಲು ಬೇಕಾದಷ್ಟು ಹಣವನ್ನು ಯಾವ ಮೂಲದಿಂದ ಹೊಂದಿಸುತ್ತಾರೋ ಗೊತ್ತಿಲ್ಲ!
ಕೃಷಿಯಲ್ಲಿ ಇಸ್ರೇಲ್ ಪದ್ಧತಿಯನ್ನು ಜಾರಿಗೊಳಿಸುವ ಬಗ್ಗೆಯೂ ಕುಮಾರಸ್ವಾಮಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಅನೇಕ ಸುಧಾರಿತ ಬೇಸಾಯ ಕ್ರಮಗಳು ಚಾಲ್ತಿಯಲ್ಲಿವೆ. ಇವುಗಳಿಗೆ ಸರ್ಕಾರ ಶೇ 50 ರಿಂದ 90 ರಷ್ಟು ಸಹಾಯಧನವನ್ನೂ ನೀಡುತ್ತಿದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ರೈತರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಹೀಗಿರುವಾಗ ಯಥೇಚ್ಛ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕ ಬಳಸಿ, ಕುಲಾಂತರಿ ತಳಿಗಳಿಂದ ಹೆಚ್ಚು ಇಳುವರಿ ಪಡೆಯುವ ಇಸ್ರೇಲ್ ಪದ್ಧತಿ ನಮಗೆ ಅಗತ್ಯವೇ? ಇಂಥ ಯೋಜನೆಗಳ ಬದಲು ಸಮಗ್ರ ಕೃಷಿ ಪದ್ಧತಿ ಆಳವಡಿಸಿಕೊಂಡು, ಹನಿ ನೀರಾವರಿ ವಿಧಾನದಲ್ಲಿ ಬೇಡಿಕೆಗೆ ಪೂರಕವಾದ ಬೆಳೆಯನ್ನು ಸಾವಯವ ವಿಧಾನದಲ್ಲಿ ಬೆಳೆದರೆ, ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ ಸಾಲ ಮನ್ನಾ ಮಾಡುವ ಅವಶ್ಯಕತೆಯೇ ಇರುವುದಿಲ್ಲ.
–ರಾಜುಗಿರಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.