ರೋಗಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ವೈದ್ಯರಿಗೆ ದೊಡ್ಡ ಮೊತ್ತದ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧವೇ ಈ ಕಾನೂನನ್ನು ಬಳಸಲಾಗುತ್ತಿದೆ.
ಈಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೇ ವೈದ್ಯರ ನಿರ್ಲಕ್ಷ್ಯದ ಹೆಚ್ಚು ಹೆಚ್ಚು ಘಟನೆಗಳು ನಡೆಯುತ್ತಿದ್ದು, ಇಲ್ಲಿನ ವೈದ್ಯರ ವಿರುದ್ಧವೂ ಕ್ರಮಕ್ಕೆ ಮುಂದಾಗಬೇಕಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಕಳವು, ಮಕ್ಕಳನ್ನು ಬದಲಾಯಿಸುವುದು, ಫೋನ್ನಲ್ಲಿ ಮಾತನಾಡುತ್ತಲೇ ರೋಗಿಗಳ ತಪಾಸಣೆ ಮಾಡುವುದು, ಅಗತ್ಯ ಇಲ್ಲದಿದ್ದರೂ ರೋಗಿಗಳಿಗೆ ದುಬಾರಿ ಔಷಧಿಗಳನ್ನು ಬರೆದುಕೊಟ್ಟು ಹೊರಗಡೆಯಿಂದ ಖರೀದಿಸಿ ತರುವಂತೆ ಸೂಚಿಸುವುದು... ಇಂಥ ಘಟನೆಗಳು ವರದಿಯಾಗುತ್ತಲೇ ಇವೆ.
ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ವಿಧಿಸುವುದರಿಂದ ಅವರು ರೋಗಿಗಳ ಬಗ್ಗೆ ಮುತುವರ್ಜಿ ವಹಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ಅಂಥ ಕಾಳಜಿ ತೋರಿಸುವುದಿಲ್ಲ. ಆದ್ದರಿಂದ ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿ ವಿರುದ್ಧವೂ ಸಂಬಂಧಪಟ್ಟವರು
ಕ್ರಮ ಕೈಗೊಳ್ಳಬೇಕು. ಬೇಜವಾಬ್ದಾರಿ ತೋರುವ ವೈದ್ಯರಿಗೆ ದಂಡ ವಿಧಿಸುವುದು ಮಾತ್ರವಲ್ಲ, ಅವರನ್ನು ಶಿಕ್ಷೆಗೂ ಒಳಪಡಿಸಬೇಕು.
-ನಿರ್ಮಲ ಟಿ. ಲಕ್ಕಿಹಳ್ಳಿ, ಹೊಸದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.