ಕನ್ನಡದ ಅಗ್ರಮಾನ್ಯ ಸಾಹಿತಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಹೊತ್ತ, ಶಿವಮೊಗ್ಗದ `ಕುವೆಂಪು ವಿಶ್ವವಿದ್ಯಾಲಯ~ವು ನಕಲಿ ಅಂಕಪಟ್ಟಿಗಳ ಹಗರಣದಿಂದಾಗಿ ಬಹಳ ಪ್ರಚಾರದಲ್ಲಿದೆ.
ಆಡಳಿತ ವೈಫಲ್ಯದಿಂದ ಸಂಭವಿಸಿರಬಹುದಾದ ಇಂತಹ ದುಷ್ಕೃತ್ಯದ, ಮುಂದಿನ ದಿನಗಳಲ್ಲಿ ಇವುಗಳನ್ನು ನಿವಾರಿಸುವ ಕುರಿತು ಇತ್ತೀಚೆಗೆ `ಕುವೆಂಪು ವಿ.ವಿ.~ಯು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದೆ.
ಈ ಜಾಹೀರಾತಿನಲ್ಲಿನ ವಾಕ್ಯರಚನೆ, ಕಾಗುಣಿತಗಳನ್ನು ಗಮನಿಸಿದವರಿಗೆ ಒಂದು ವಿಶ್ವವಿದ್ಯಾಲಯ, ಅದರಲ್ಲೂ ಕನ್ನಡ ಕಂಪನ್ನು ಪಸರಿಸಿದ `ಕುವೆಂಪು~ ಸ್ಮರಣೆಯಲ್ಲಿ ಸ್ಥಾಪಿತ ವಿಶ್ವವಿದ್ಯಾಲಯ ಎಷ್ಟು ಜವಾಬ್ದಾರಿ - ಕರ್ತವ್ಯನಿಷ್ಠೆ ಮೆರೆದಿದೆ ಎಂದು ಸೋಜಿಗವಾಗುತ್ತದೆ.
ಕನಿಷ್ಠ ಪಕ್ಷ ವ್ಯಾಕರಣ, ಕಾಗುಣಿತ, ಮುದ್ರಣದೋಷ ಅಲ್ಪ - ಪೂರ್ಣವಿರಾಮಗಳಂಥ ಸಂಗತಿಗಳನ್ನೇ ಸರಿಪಡಿಸಲಾಗದ ಆಡಳಿತಗಾರರು, ಸಿಬ್ಬಂದಿ ಇನ್ನು ಆ ವಿಶ್ವವಿದ್ಯಾಲಯವನ್ನು ಎಷ್ಟರ ಮಟ್ಟಿಗೆ ಸುಧಾರಿಸಿಯಾರು?
ಕೇವಲ 9 ಕಂಡಿಕೆಗಳ ಜಾಹೀರಾತಿನಲ್ಲಿ 10 ದೋಷಗಳು ಎದ್ದು ಕಾಣುತ್ತಿವೆಯೆಂದರೆ, ವಿಶ್ವವಿದ್ಯಾಲಯಗಳೇ ನಾಡನುಡಿಯ ಬಗ್ಗೆ ತಾತ್ಸಾರಭಾವದಿಂದ ಬರಹಗಳನ್ನು ಪ್ರಕಟಣೆಗೆ ಕಳುಹಿಸುವಂತಾದಲ್ಲಿ ಯಾರನ್ನು ದೂಷಿಸಬೇಕು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.