ADVERTISEMENT

ಕರಾವಳಿಯ ಅನಾಹುತ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಕರಾವಳಿಯ ಮೀನುಗಾರರ ಪಾಲಿಗೆ ಮಂಗಳೂರು ಅಳಿವೆ ಬಾಗಿಲು ಮತ್ತೊಮ್ಮೆ ದುರಂತದ ಬಾಯಿ ತೆರೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಪ್ರತೀ ವರ್ಷವೂ ಜೀವ ಕಳೆದುಕೊಳ್ಳುವ ಅಮಾಯಕ ಮೀನುಗಾರರ ಪಟ್ಟಿಗೆ ಮತ್ತೆ ಹೊಸಬರೂ ಸೇರ್ಪಡೆಯಾಗಿ ಕಡಲ ಭೋರ್ಗರೆತದೊಂದಿಗೆ ಅವರೂ ಬೆರೆತು- ಮರೆತು ಹೋಗುವ ಮುನ್ನ ಒಂದಿಷ್ಟು ಮಾನವೀಯ ಕಳಕಳಿಯಿಂದ ಯೋಚಿಸಬೇಕಿದೆ.

ಈ ಬಾರಿಯ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ವ್ಯಕ್ತಿಯೂಬ್ಬ ಸೇರಿದಂತೆ ಕಣ್ಮರೆಯಾಗಿ ಕಡಲು ಸೇರಿದ ಇತರ ಆರು ಮಂದಿ ಮೀನುಗಾರರೂ ಕಡಲ ಭೀಷಣ ನರ್ತನದೊಂದಿಗೇ, ದಡದಲ್ಲಿದ್ದ ಮನುಷ್ಯರ ಭೀಕರ ಕ್ರೌರ್ಯವನ್ನು ಅಕ್ಷರಶಃ ಕಂಡುಂಡು ನೀರುಪಾಲಾದರೆಂಬುದೇ ವಿಷಾದಕರ.

ಕೇಂದ್ರ ಸರ್ಕಾರದ ಸುಪರ್ದಿಗೆ ಬರುವ ಬಂದರು ಆಡಳಿತದ ಈ ರೀತಿಯ ಅಮಾನವೀಯ ವರ್ತನೆ ಇದೇ ಮೊದಲ ಸಲವಲ್ಲವಾದರೂ, ಸ್ಥಳೀಯ ಸರ್ಕಾರವಾಗಲಿ, ಸಂಬಂಧಿಸಿದ ಇಲಾಖೆಯಾಗಲಿ ಈ ಬಗ್ಗೆ ಯಾವ ಸುಧಾರಿತ ಕ್ರಮಗಳನ್ನೂ ತೆಗೆದುಕೊಂಡಂತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಅನಾಹುತಗಳು ಮತ್ತೆ ಮರುಕಳಿಸದಂತೆ ಸಂಬಂಧಿಸಿದವರು ಕ್ರಮಕೈಗೊಳ್ಳುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.