ರಾಜರಾಜೇಶ್ವರಿ ನಗರ ಸಭೆಗೆ ಸೇರಿರುವ ಚನ್ನಸಂದ್ರ ಗ್ರಾಮದ ರಸ್ತೆ ಹಾಗೂ ಚರಂಡಿಗಳೆಲ್ಲಾ ಕಸದಿಂದ ತುಂಬಿ ತುಳುಕುತ್ತಿದ್ದರೂ ಈ ಕಡೆಗೆ ಪೌರ ಕಾರ್ಮಿಕರು ತಲೆ ಹಾಕುತ್ತಿಲ್ಲ. ಅಂದರೆ ಗುತ್ತಿಗೆದಾರರಿಗೆ ಈ ಊರು ಗೊತ್ತಿಲ್ಲ. ಮೇಸ್ತ್ರಿಗೆ ಮೊದಲೇ ತಿಳಿದಿಲ್ಲ.
ಇನ್ನು ಆರೋಗ್ಯಾಧಿಕಾರಿಗಳಿಗೆ ಈ ಕಡೆಗೆ ಬರಲು ಪುರುಸೊತ್ತಿಲ್ಲ. ಇದರಿಂದಾಗಿ ಇಡೀ ಊರಿಗೆ ಊರು ಗಬ್ಬೆದ್ದು ನಾರುತ್ತಿದೆ. ರಾಜರಾಜೇಶ್ವರಿ ನಗರ ಸಭೆಯ ಅಧಿಕಾರಿಗಳಿಗೆ ಈ ಊರು ಬಿ.ಬಿ.ಎಂ.ಪಿ.ಗೆ ಸೇರಿದೆಯೋ ಇಲ್ಲವೋ ಎಂಬುದನ್ನು ತಿಳಿಸಿಕೊಡಿ ಎಂದು ನೆನಪಿಸುತ್ತೇವೆ. ಈ ಭಾಗದಲ್ಲಿ ಬಂದು ಕೆಲಸ ಮಾಡುವ ಪೌರ ಕಾರ್ಮಿಕರು ಕೇವಲ ಇಬ್ಬರೋ ಮೂವರೋ ಇರಬೇಕು. ಅವರು ಕೂಡ ಯಾರದಾದರೂ ಒಂದಿಬ್ಬರು ಪ್ರಭಾವಿಗಳ ಮನೆಯ ಕಡೆ ಹೋಗಿ ಕೆಲಸ ಮಾಡುವುದರಲ್ಲಿ ಮಗ್ನರಾಗುತ್ತಾರೆ. ಯಾರು ಕೆಲಸಕ್ಕೆ ಬಂದಿದ್ದಾರೆ, ಯಾರು ಬಂದಿಲ್ಲ ಎಂಬುದನ್ನು ತಿಳಿಯುವುದು ಕಷ್ಟ. ಆದ್ದರಿಂದ ನಾವು ರಾಜರಾಜೇಶ್ವರಿ ನಗರ ಸಭೆಯ ಅಧಿಕಾರಿಗಳಲ್ಲಿ ಕೇಳುವುದು ಒಂದೇ, ಈ ಊರಿಗೆ ಪೌರ ಕಾರ್ಮಿಕರನ್ನು ನೇಮಿಸುವಿರಾ?, ಇಲ್ಲವಾ? ದಯವಿಟ್ಟು ತಿಳಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.