ಬೆಂಗಳೂರಿನಲ್ಲಿ ವಿದ್ಯುನ್ಮಾನ ಮಾಧ್ಯಮದವರ ಮೇಲಿನ ಹಲ್ಲೆ ಬಗ್ಗೆ ಪೊಲೀಸರಿಗೆ ಮುನ್ಸೂಚನೆ ಇದ್ದಿತೆಂಬುದು ನಿಜವಾಗಿದ್ದಲ್ಲಿ ಈಗ ಪತ್ರಕರ್ತರು ಹಾಗೂ ವಕೀಲರ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ನಿಲ್ಲಿಸಿ ಗಲಭೆಯ ಹಿಂದಿನ ಕಾಣದ ಕೈಗಳು ಯಾವುವು ಎಂಬುದನ್ನು ತಿಳಿಯಲು ಯತ್ನಿಸುವುದು ಅತಿ ಜರೂರಾಗಿ ಆಗ ಬೇಕಾಗಿರುವ ಕೆಲಸ.
ಮಾಜೀ ಮಂತ್ರಿಯೊಬ್ಬರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವ ಸಮಯದಲ್ಲಿ ಹೀಗೆ ಆಗಿದೆಯೆಂದರೆ ಅದರ ಹಿಂದೆ ಬೇರೆಯೇ ಶಕ್ತಿಗಳು ಕೆಲಸಮಾಡಿವೆ ಎಂದೇ ಹೇಳಬಹುದು. ಹಿಂದೆ ಒಬ್ಬ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಕೋಮು ಗಲಭೆಹುಟ್ಟುಹಾಕಿದ ರಾಜಕೀಯ ಚರಿತ್ರೆ ಇರುವ ರಾಜ್ಯ ಇದು.
ಸಮಾಜದಲ್ಲಿ ಮಾಧ್ಯಮಗಳು ಮತ್ತು ನ್ಯಾಯವಾದಿಗಳು ಇಬ್ಬರೂ ಅತಿ ಮುಖ್ಯ ಪಾತ್ರ ವಹಿಸುವವರು. ಇಂಥವರು ಬೇರೆ ಯಾರದೋ ಚಿತಾವಣೆಗೆ ಒಳಗಾಗಿ ಒಬ್ಬರ ಮೇಲೊಬ್ಬರು ಕೆಸರು ಚೆಲ್ಲುವುದು ಆತಂಕಕಾರಿಯಾದ ಬೆಳವಣಿಗೆ.
ಹಾಗಾಗಿ ಪ್ರತಿಷ್ಠೆಯನ್ನು ಬದಿಗೊತ್ತಿ ವಸ್ತುನಿಷ್ಠವಾಗಿ ಆಗಿದ್ದೇನು ಮತ್ತು ಆಗಬೇಕಾದದ್ದೇನು ಎಂಬುದರ ಕುರಿತು ಎರಡೂ ಕಡೆಯವರು ಜತೆಗೂಡಿ ಯೋಚನೆ ಮಾಡುವುದು ಮುಂದಿನ ಕಾರ್ಯಕ್ರಮವಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.