ADVERTISEMENT

ಕಾರ್ಯಕರ್ತರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಬೆನ್ನೆಲುಬು; ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕೆ ನಿಷ್ಠೆಯಿಂದ ಶ್ರಮಿಸುವವರು. ಆದರೆ, ಇಂದು ಎಲ್ಲಾ ರಾಜಕೀಯ ಪಕ್ಷಗಳು ಕಾರ‌್ಯಕರ್ತರನ್ನು ನಿರ್ಲಕ್ಷಿಸುತ್ತಿವೆ. ಕಾರ‌್ಯಕರ್ತರಿಗೆ ಸಿಗಬೇಕಾದ ಸೂಕ್ತ ಸ್ಥಾನಮಾನಗಳು ಪಕ್ಷಗಳ ನಾಯಕರ ಕುಟುಂಬದ ಕುಡಿಗಳ ಪಾಲಾಗುತ್ತಿದೆ.

ಕುಟುಂಬ ರಾಜಕಾರಣದಿಂದ ಇಂದು ಕಾರ‌್ಯಕರ್ತರು ಅತಂತ್ರರಾಗುತ್ತಿದ್ದಾರೆ. ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಬಿಜೆಪಿ ಮತ್ತು ಜನತಾ ಪರಿವಾರಗಳಲ್ಲಿಯೂ ಇಂದು ಕುಟುಂಬ ರಾಜಕಾರಣ ಸಾಮಾನ್ಯ ವಿದ್ಯಮಾನವಾಗಿದೆ.

ತಂದೆಯ ರಾಜಕೀಯ ಪ್ರಭಾವ ಬಿಟ್ಟರೆ ಈ ಯುವ ನಾಯಕರ ರಾಜಕೀಯ ಅನುಭವವೇನು? ಇವರ ರಾಜಕೀಯ ಪ್ರವೇಶ, ಪಕ್ಷದ ಯುವ ಘಟಕಗಳ  ಅಧ್ಯಕ್ಷರಾಗುವುದು, ರಾಜ್ಯ ಘಟಕದ ಪ್ರಧಾನ ಕಾರ‌್ಯದರ್ಶಿಗಳಾಗುವುದು, ಇಲ್ಲವೆ ತಂದೆಗೆ ಬೆಂಬಲ ನೀಡಿದ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ವಿಧಾನ ಸೌಧ ಪ್ರವೇಶಿಸುವುದು.
 
ಯಾವುದೇ ರಾಜಕೀಯ ತಿಳುವಳಿಕೆ, ಸೈದ್ಧಾಂತಿಕ ನಿಲುವುಗಳನ್ನು ಬೆಳೆಸಿಕೊಳ್ಳದೆ, ಜನರ ಕಷ್ಟಗಳನ್ನು, ಕಾರ‌್ಯಕರ್ತರ ಶ್ರಮವನ್ನು ಅರಿಯದೇ ಸುಲಭವಾಗಿ ಆಧಿಕಾರವನ್ನು ಪಡೆಯವುದು.

ಯಾವುದೇ ಪ್ರತಿಫಲ ಅಪೇಕ್ಷಿಸದೆ ತಮ್ಮ ನೆಚ್ಚಿನ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವ ಕಾರ್ಯಕರ್ತರಿಗೆ ಸಿಗಬೇಕಾದ ರಾಜಕೀಯ ಅಧಿಕಾರವನ್ನು ಕುಟುಂಬ ರಾಜಕಾರಣ ಇಂದು ನುಂಗಿ ಹಾಕುತ್ತಿದೆ. ಈ ಬಗ್ಗೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಆಲೋಚಿಸಿ ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.