ADVERTISEMENT

ಕಾರ್ಯನಿರ್ವಹಣಾಧಿಕಾರಿ ಏಕಿಲ್ಲ?

ರಾಮಚಂದ್ರ ಎಸ್.ಪಿ., ಉಡುಪಿ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಹಿಂದೂ ಧಾರ್ಮಿಕ ದತ್ತಿ ವಿಧೇಯಕ (ತಿದ್ದುಪಡಿ) 2011. ಜಾರಿಯಾಗಿ ಒಂದು ವರ್ಷ ಕಳೆದರೂ ರಾಜ್ಯ ಮುಜರಾಯಿ ಆಯುಕ್ತರು ಹೆಚ್ಚಿನ ಆದಾಯವಿರುವ ಶ್ರೀಮಂತ ದೇವಾಲಯಗಳಿಗೆ ಕಾರ್ಯ ನಿರ್ವಹಣಾಧಿಕಾರಿಗಳನ್ನು ನೇಮಿಸ್ಲ್ಲಿಲ. ರಾಜ್ಯದಲ್ಲಿರುವ ವಾರ್ಷಿಕ ಒಂದು ಕೋಟಿಗೂ ಮಿಕ್ಕಿ ಆದಾಯವಿರುವ `ಎ' ಪ್ರವರ್ಗದ ದೇಗುಲಗಳಿಗೆ ಹಾಗೂ ವಾರ್ಷಿಕ 50 ಲಕ್ಷ ರೂ. ಮೀರಿ ಆದಾಯವಿರುವ `ಬಿ' ಪ್ರವರ್ಗ ದೇಗುಲಗಳಿವೆ. ರಾಜ್ಯ ಆಯುಕ್ತರು ಕಾರ್ಯನಿರ್ವಹಣಾಧಿಕಾರಿ ನೇಮಿಸತಕ್ಕದ್ದು ಎಂದು ನಿಯಮಾವಳಿ 33 (1) ಸ್ಪಷ್ಟಪಡಿಸಿದ್ದರೂ ಈವರೆಗೂ ನೇಮಕ ಮಾಡದಿರುವುದು ಸಮಂಜಸವಲ್ಲ.

ಉಡುಪಿ ಜಿಲ್ಲೆಯಲ್ಲಿರುವ `ಎ' ಪ್ರವರ್ಗದ ಸುಮಾರು ಮೂರು ಮತ್ತು `ಬಿ' ಪ್ರವರ್ಗದ ಕೆಲವು ದೇಗುಲಗಳಿಗೆ ಇನ್ನೂ ಸಹಾ ಕಾರ್ಯನಿರ್ವಹಣಾಧಿಕಾರಿ ನೇಮಕವಾಗಿಲ್ಲ. ಹೆಚ್ಚಿನ ಆದಾಯವಿರುವ ಇಂತಹ ದೇಗುಲಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ದಿನನಿತ್ಯ ದಿನಪತ್ರಿಕೆಗಳಲ್ಲಿ ವರದಿ ಬರುತ್ತವೆ. ಅಲ್ಲದೇ ಸಾರ್ವಜನಿಕರು ಹಲವಾರು ಬಾರಿ ಇಲಾಖೆಗೆ ದೂರು ಕೂಡ ನೀಡಿದ್ದಾರೆ. ಆದರೆ ದೇವಾಲಯಗಳ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡವೋ, ರಾಜಕೀಯ ಪ್ರಭಾವವೋ ಅಥವಾ ಇಲಾಖಾ ಆಯುಕ್ತರ ಕರ್ತವ್ಯ ಲೋಪವೋ ತಿಳಿಯದು. ಈ ವರೆಗೂ ಇಂತಹ ದೇಗುಲಗಳಿಗೆ ಕಾರ್ಯನಿರ್ವಹಣಾಧಿಕಾರಿ ನೇಮಿಸದೇ ಸಾರ್ವಜನಿಕರು, ಭಕ್ತರು ದೇವಾಲಯಗಳಿಗೆ ನೀಡುವ ಕಾಣಿಕೆ ಇತ್ಯಾದಿಗಳು ಕೆಲವೇ ಹಿತಾಸಕ್ತಿಗಳು ತಮಗೆ ಇಷ್ಟಬಂದಂತೆ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.