ಬೆಂಗಳೂರು, ಬೃಹತ್ ಮಹಾನಗರವಾಗಿ ವಿಸ್ತರಣೆಯಾಗುವ ಸಂದರ್ಭದಲ್ಲಿ ನಗರದ ವ್ಯಾಪ್ತಿಯಲ್ಲಿರುವ ಕೆರೆಯಂಗಳಗಳು ಬಡಾವಣೆಗಳಾಗಿ ಮಾರ್ಪಾಡಾಗುವ ಮೂಲಕ ಮಹಾನಗರದ ಭೂಮಿಯೊಳಗಿನ ಅಂತರ್ಜಲದ ಮಟ್ಟ ಆಘಾತಕಾರಿ ಮಟ್ಟಕ್ಕೆ ಕುಸಿದಿದ್ದು ನೀರಿನ ಹಾಹಾಕಾರ ಉಂಟಾಗಿದೆ.
ನಗರ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳು ಬಡಾವಣೆಗಳಾದರೂ ಒಂದಷ್ಟು ಕೆರೆಗಳು ನಗರದ ವಿವಿಧ ಭಾಗಗಳಲ್ಲಿ ಇನ್ನೂ ಜೀವಂತ ಇವೆ. ಆದರೆ ಅವುಗಳ ಸಮರ್ಪಕ ನಿರ್ವಹಣೆಯಿಲ್ಲದೆ ಹೂಳುತುಂಬಿ, ಕಸ ಬೆಳೆದು ರೂಪಾಂತರಗೊಂಡಿರುವುದನ್ನು ಗಮನಿಸಿ ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಪಾಲಿಕೆ ಸುಮ್ಮನೆ ಕುಳಿತಿರುವುದು ವಿಷಾದನೀಯ. ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳನ್ನು ನಿರ್ಮಿಸುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಿಸಬೇಕಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಸಂಸ್ಥೆಗಳು ಬಡಾವಣೆಗಳ ರಚಿಸುವುದಕ್ಕೂ ಮೊದಲು ಕೆರೆ ನಿರ್ಮಿಸುವುದು ಮತ್ತ ಮಳೆ ನೀರು ಕೆರೆಗೇ ಹರಿದುಬರುವಂತೆ ಮಾಡುವ ಕ್ರಮವನ್ನು ಜಾರಿಗೊಳಿಸಬೇಕಾಗಿದೆ. ಅಷ್ಟೇ ಅಲ್ಲ ಹೊಸ ಬಡಾವಣೆ ನಿರ್ಮಾಣದ ವೇಳೆ ಗಟ್ಟಿ ಬೇರಿನ ಗಿಡಗಳನ್ನು ನೆಡುವುದನ್ನೂ ಕಡ್ಡಾಯಗೊಳಿಸಬೇಕು. ಮಹಾನಗರದ ಅಂತರ್ಜಲ ಹೆಚ್ಚಳಕ್ಕೆ ಇದೊಂದೇ ಮಾರ್ಗ ಉಳಿದಿರುವುದು.
ರಾಜ್ಯ ಸರಕಾರ, ಶಾಸಕರು, ಮಹಾನಗರಪಾಲಿಕೆ, ಪುರಪಿತೃಗಳು ಹಾಗೂ ಪರಿಸರವಾದಿಗಳು ಈ ಕುರಿತು ಸಕಾರಾತ್ಮಕ ಚಿಂತನೆ ಮಾಡಿ ಬಡಾವಣೆಗೊಂದು ಕೆರೆ ಹಾಗೂ ಬಡಾವಣೆಗಳ ರಸ್ತೆಗುಂಟ ಮರಗಳನ್ನು ಬೆಳಸಲು ಅವಕಾಶ ಮಾಡಿಕೊಟ್ಟು ಮಹಾನಗರವನ್ನು ಅಂದವಾಗಿಡಲು ಕ್ರಮ ಜರುಗಿಸಲು ಕೋರುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.