`ಸಾಹಿತಿಯ ಆಷಾಢಭೂತಿ ನಿಲವು' (ವಾ. ವಾ. ಏ. 19) ಬೆಂಗಳೂರಿನ ಪ್ರೊ. ಶಿವರಾಮಯ್ಯನವರ ಪತ್ರಕ್ಕೆ ಪೂರಕವಾಗಿ ಈ ಪ್ರತಿಕ್ರಿಯೆ.
ವಿಚಾರವಾದಿ ಚಿಂತಕರೆಂದು ಸ್ವಯಂ ಘೋಷಿಸಿಕೊಂಡು ತಮ್ಮ ಸ್ವಾರ್ಥಸಾಧನೆಗಾಗಿ ರಾಜಕೀಯ ಪಕ್ಷಗಳನ್ನು ಪುಸಲಾಯಿಸುತ್ತಾ, ಯಾವ ಎಗ್ಗು ಇಲ್ಲದೆ ಪಕ್ಷದ ಕಾರ್ಯಕರ್ತರಂತೆ ಪ್ರಚಾರ ಮಾಡುವ ಕೆಲವು ಸ್ವಾರ್ಥ ಸಾಹಿತಿಗಳು ರಾಜಕಾರಣಿಗಳಿಗಿಂತ ಬಹು ಅಪಾಯಕಾರಿ.
60 ವರ್ಷಗಳಿಂದ ಈ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೃಷ್ಟಿಸಿದ ಅವಾಂತರಗಳು ದೇಶವನ್ನು ಹೀನಾಯ ಸ್ಥಿತಿಗೆ ತಂದಿದೆ. ಕಾಶ್ಮೀರ, ಪಾಕ್ - ಭಾರತದ ಗಡಿ ವಿವಾದಗಳನ್ನು ಜೀವಂತವಾಗಿರಿಸಿ, ದೇಶವನ್ನು ಛಿದ್ರಗೊಳಿಸುವ ಉಗ್ರಗಾಮಿಗಳ ಭಯೋತ್ಪಾದನೆ ರಾಜಾರೋಷವಾಗಿ ನಡೆಯುತ್ತಿದ್ದರೂ ಆಂತರಿಕ ಭದ್ರತೆಯನ್ನು ನಿಯಂತ್ರಿಸುವಲ್ಲಿ ಮೆದುಧೋರಣೆ ತೋರಿ, ದೇಶದಲ್ಲಿ ನಡೆಯುವ ಕೋಮುಗಲಭೆಯನ್ನು ತನಗಾಗದ ವಿರೋಧ ಪಕ್ಷದ ಮೇಲೆ ಆರೋಪಿಸಿ, ತಾನು ಜಾತ್ಯತೀತವೆಂದು ಹುಸಿ ಆಶ್ವಾಸನೆಯನ್ನು ಬಿಂಬಿಸುತ್ತ ಬಂದಿರುವುದು ಯಾರಿಗೆ ಗೊತ್ತಿಲ್ಲ.
ಕಾಂಗ್ರೆಸ್ ಪಕ್ಷ ಇಷ್ಟೆಲ್ಲ ಅಗಾಧವಾದ ತಪ್ಪುಗಳನ್ನು ಎಸಗಿದರೂ ಪಕ್ಷದ ಋಣದಿಂದ ಉಪಕೃತವಾದ ಕೆಲವು ಸಾಹಿತಿಗಳಿಗೆ ಅವು ಪ್ರಮಾದವಾಗಿ ಕಾಣಿಸುವುದಿಲ್ಲ, ಪಕ್ಷವನ್ನು ಬೆಂಬಲಿಸುವುದಾಗಿ ಪತ್ರಿಕಾ ಹೇಳಿಕೆ ನೀಡಿ, ಆ ಪಕ್ಷದಿಂದ ಪಡೆದ ವೈಯಕ್ತಿಕ ಉಪಕಾರಗಳಿಗೆ ಋಣ ತೀರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.