‘ಮಾರ್ಚ್ 20’ ವಿಶ್ವ ಗುಬ್ಬಿಗಳ ದಿನ. ಅವು ಕಣ್ಮರೆಯಾಗುತ್ತಿವೆ ಎಂಬ ಆತಂಕ ಎಲ್ಲೆಡೆ. ಕೆಲವು ವರ್ಷಗಳ ಹಿಂದೆ ಅವು ಹೀಗೆ ಕಾಣದಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ದುರಂತ ಇಂದು ಅವುಗಳ ಉಳಿವಿಗಾಗಿ ಹೋರಾಡಬೇಕಿದೆ. ಗುಬ್ಬಿಗಳ ಜೊತೆ ಜೊತೆಗೆ ಇನ್ನೂ ಅನೇಕ ಜೀವಿಗಳು ಕಣ್ಮರೆಯಾಗುತ್ತಿವೆ.
ಹಿಂದೆ ಊರಿಗೊಂದು ಕೆರೆ, ಕುಂಟೆ ಇದ್ದೇ ಇರುತ್ತಿತ್ತು. ಊರ ಸುತ್ತಾ ಹಳ್ಳಗಳಲ್ಲಿ ನೀರು ಹರಿಯುತ್ತಿತ್ತು. ಇಂದು ಅದ್ಯಾವುದೂ ಇಲ್ಲ. ನೀರಿನ ಆಸರೆ ಇಲ್ಲವಾಗಿ ಆಹಾರ ಸರಪಳಿಯ ಮುಖ್ಯಕೊಂಡಿಯಾದ ಕಪ್ಪೆಗಳು ಇಲ್ಲವಾಗುತ್ತಿವೆ ಎಂಬ ವರದಿಯೂ ಇದೆ.
ಇಂಥ ಇನ್ನೆಷ್ಟು ಜೀವಿಗಳು ನಾಮಾವಶೇಷವಾಗುವತ್ತ ಸಾಗುತ್ತಿವೆಯೋ ಸರಿಯಾಗಿ ಗೊತ್ತಿಲ್ಲ. ಹಾಗಾದರೆ ಈ ಪರಿಸರ ಉಳಿಸುವಲ್ಲಿ ಸಾಮಾನ್ಯ ಜನತೆ ಮಾಡುವುದೇನು?
ಕನಿಷ್ಠ ಪ್ಲಾಸ್ಟಿಕ್ ಬಳಕೆ ನಿಯಂತ್ರಣ., ಕಡ್ಡಾಯ ಮಳೆನೀರು ಸಂಗ್ರಹ, ನೀರು, ವಿದ್ಯುತ್ ಪೋಲಾಗದಂತೆ ಎಚ್ಚರ. ಪೆಟ್ರೋಲ್, ಡೀಸೆಲ್ ಮಿತವ್ಯಯ, ಸಾಧ್ಯವಾದಲ್ಲೆಲ್ಲಾ ವಸ್ತುಗಳ ಮರುಬಳಕೆ ಹಾಗೂ ದುರಾಸೆಗಳಿಗೆ ನಿಯಂತ್ರಣ ಕ್ರಮ ಕೈಗೊಂಡಲ್ಲಿ ‘ಪರಿಸರ ಮಿತ್ರ’ರಾದೆವೆಂದೇ ಹೇಳಬಹುದು. ನಮ್ಮ ಸಹಜೀವಿಗಳಿಲ್ಲದ ಈ ಬರಡು ಭೂಮಿಯಲ್ಲಿ ನಾವೊಬ್ಬರೇ ಇರಲಾರೆವೆಂಬ ಎಚ್ಚರ ಅತ್ಯಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.