ADVERTISEMENT

ಗುಡಿ ನಿರ್ಮಿಸುವಾಗ ಸುಮ್ಮನಿದ್ದರೇಕೆ?

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

‘ಶನಿದೇಗುಲ ತೆರವಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ’ (ಪ್ರ.ವಾ., ಜೂನ್ 2) ಸುದ್ದಿಯ ಹಿನ್ನೆಲೆಯಲ್ಲಿ ಈ ಪತ್ರ.

1987ರ ಸುಮಾರಿನಲ್ಲಿ ಒಬ್ಬ ಮಹಿಳೆ, ಶನಿ ದೇವರ ಫೋಟೊವನ್ನು ಕತ್ತಿಗೆ ತೂಗುಹಾಕಿಕೊಂಡು ಬೆಂಗಳೂರಿನ ವಿಜಯನಗರದ ಸರ್ವಿಸ್ ರಸ್ತೆಯಲ್ಲಿ ಇರುವ ಅಂಗಡಿಗಳ ಮಂದೆ ಓಡಾಡುತ್ತಿದ್ದಳು. ಅವಳ ಬಳಿ ಇದ್ದ ತಟ್ಟೆಗೆ ಕೆಲವರು ಹಣ ಹಾಕುತ್ತಿದ್ದರು.

ಅವಳನ್ನು ಮಾತನಾಡಿಸಿದಾಗ, ತಾನು ಓಕುಳಿಪುರಂ ರೈಲ್ವೆ ಕ್ವಾರ್ಟರ್ಸ್‌ನಲ್ಲಿ ಇರುವುದಾಗಿ ತಿಳಿಸಿದ್ದಳು. ಒಂದೆರಡು ವರ್ಷಗಳ ಬಳಿಕ ಅದೇ ಪೋಟೊವನ್ನು ಆಕೆ ತಳ್ಳುಗಾಡಿಯಲ್ಲಿ ಇಟ್ಟು ತಳ್ಳಿಕೊಂಡು ಬರತೊಡಗಿದಳು. ವರ್ಷಗಳು ಉರುಳಿದಂತೆ ತಳ್ಳುವ ಗಾಡಿ ವಿಜಯನಗರದ ಕಡೆಗೆ ಬರುವುದು ನಿಂತಿತು. ಆ ತಳ್ಳು ಗಾಡಿ ಶನಿಯ ಫೋಟೊದೊಂದಿಗೆ ಆಕೆಯ ಮನೆಯ ಮುಂದೆ ಇರುವ ಫುಟ್‌ಪಾತ್‌ನಲ್ಲಿ ನಿಂತಿತು. ಆ ಗಾಡಿಯಲ್ಲಿ ಇಟ್ಟ ತಟ್ಟೆಗೆ ಅಲ್ಲಿ ಓಡಾಡುವ ಜನರು ಹಣ ಹಾಕಿ ಕೈಮುಗಿಯುತ್ತಿದ್ದರು.

ADVERTISEMENT

ಕೆಲವು ದಿನಗಳ ಬಳಿಕ ಅಲ್ಲಿ ಟೈಲ್ಸ್‌ ಹಾಕಿದ ಪುಟ್ಟ ಗುಡಿಯೊಂದು ಎದ್ದಿತು. ಕೆಲವೇ ವರ್ಷಗಳಲ್ಲಿ ಅದನ್ನೂ ತೆಗೆದು, ಸ್ವಲ್ಪ ದೊಡ್ಡದಾದ ಗುಡಿ ಕಟ್ಟಿ, ಅದಕ್ಕೆ ದೇವಸ್ಥಾನದ ಆಕಾರ, ಪರಿಕಲ್ಪನೆ ನೀಡಲಾಯಿತು. ಇಷ್ಟೆಲ್ಲ ನಡೆದಾಗ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನಿದ್ದರೇಕೆ ಎಂಬುದು ನಮ್ಮ ಪ್ರಶ್ನೆ.

ಡಾ. ಇಂದಿರಾ ಹೆಗ್ಗಡೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.