ADVERTISEMENT

ಚಿತ್ರ, ಶಿಲ್ಪ ಕಲಾವಿದರ ನಿರ್ಲಕ್ಷ್ಯ ಏಕೆ?

ಎಲ್‌.ಶಿವಲಿಂಗಪ್ಪ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಮೈಸೂರಿನ ದಸರಾ ಹತ್ತಿರವಾದಂತೆ ಪ್ರವಾಸಿಗರನ್ನು ಆಕರ್ಷಿಸಲು ಕಳೆದ ವರ್ಷಕ್ಕಿಂತ ಈ ವರ್ಷ ವ್ಯವಸ್ಥೆ ಉತ್ತಮಗೊಳಿಸುತ್ತಿದ್ದೇವೆಂಬ ಘೋಷಣೆ ಯೊಂದಿಗೆ ಚರ್ವಿತ ಚರ್ವಣ ಯೋಜನೆಗಳನ್ನು ಆರಂಭಿಸಿ ಯಥಾ ರೀತಿ ಯಲ್ಲಿರುವ ರಸ್ತೆಗೆ ಬೆಳಕಿನ ದೀಪಗಳನ್ನು ಹಚ್ಚಿ ಜಗಮಗಿಸಿ ಸಿಕ್ಕಷ್ಟು ಜೇಬನ್ನು ತುಂಬಿಕೊಳ್ಳುವ ಸಂಪ್ರದಾಯ ಮಾತ್ರ ಮುನ್ನಡೆಯುತ್ತಿದೆ.

ಹೀಗಿದ್ದರೂ ಪ್ರವಾಸಿಗರು ಅರಮನೆ ನೋಡಲು ಬರುತ್ತಾರೆ. ಬೊಕ್ಕಸ ತುಂಬುತ್ತದೆ. ಕಲೆ ಶಿಲ್ಪಾದಿಗಳಿಲ್ಲದಿದ್ದರೆ ಅರಮನೆಗೆ ಯಾರು ಬರುತ್ತಿದ್ದರು? ಆದರೆ ದಸರಾ ಸಂದರ್ಭದಲ್ಲಿ  ಸೌಜನ್ಯಕ್ಕಾದರೂ ಚಿತ್ರಗಾರನನ್ನಾಗಲೀ, ಶಿಲ್ಪಿ ಯನ್ನಾಗಲಿ ಕರೆದು ಉದ್ಘಾಟಿಸಿದ್ದಾರೆಯೆ? ಸಾಹಿತ್ಯ ಕ್ಷೇತ್ರ ಸಿಂಹಪಾಲು ಪಡೆದರೆ ಸಂಗೀತ ಗಾರರಿಗೆ ಕೆಂಪು ಹಾಸಿಗೆ ಹಾಸಿ ಸುಸ್ವಾಗತದ ಸುರಿಮಳೆ, ಸಾಲದೆಂಬಂತೆ ಸಂಗೀತಗಾರ  ಒಬ್ಬರಿಗೆ ಆಸ್ಥಾನ ವಿದ್ವಾನ್‌ ಪದವಿ ಗೌರವ ಬೇರೆ. ಪ್ರವಾಸಿಗರು ಯಾವ ಸಂಗೀತಗಾರರನ್ನು ನೋಡಲು ಬರುತ್ತಾರೆ? ಎಷ್ಟು ಆದಾಯವಿದೆ ಸರ್ಕಾರಕ್ಕೆ? ಇಂತಹ ವಿಚಾರಗಳು ಸಂಸ್ಕೃತಿ ಇಲಾಖೆಗೆ, ದಸರಾ ಸಮಿತಿಗಳಿಗೆ, ಮೇಲಾಗಿ ಆದಾಯದಿಂದಲೇ ಬದುಕುತ್ತಿರುವ ಅರಮನೆ ಮಂಡಲಿಗೆ  ತಿಳಿಯದೆ?

ಸಾಂಸ್ಕೃತಿಕ ನಗರಿ ಎಂಬ ಹಣೆಪಟ್ಟಿ ಹೊತ್ತಿರುವ ಮೈಸೂರಿನಿಂದ ಶಿಲ್ಪಕಲಾ ಅಕಾಡೆಮಿಗೆ ಒಬ್ಬರನ್ನಾದರೂ ಇದುವರೆಗೆ ಅಧ್ಯಕ್ಷರನ್ನಾಗಿ ಮಾಡಿಲ್ಲ. ಬೆಂಗಳೂರಿಗೆ ಅಪಾರ ಪ್ರೋತ್ಸಾಹ. ಅಲ್ಲಿರುವವರಿಗೆ ಅವಕಾಶ ಏಕೀ ತಾರತಮ್ಯ?
ಇನ್ನಾದರೂ ಮೈಸೂರಿನವರೇ ಆದ ಮುಖ್ಯಮಂತ್ರಿಗಳು ಇದನ್ನೆಲ್ಲಾ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವರೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.