ADVERTISEMENT

ಜವಾಬ್ದಾರಿಯಿಂದ ಜಾರಿಕೊಳ್ಳಲು ಸಾಧ್ಯವಿಲ್ಲ

ಕೆ.ವಿ.ಸೀತಾರಾಮಯ್ಯ, ಹಾಸನ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

`ಕಲ್ಲಿದ್ದಲು ನಿಕ್ಷೇಪಗಳ ಮಂಜೂರಾತಿಗೆ ಸಂಬಂಧಿಸಿದ ಕಡತಗಳ ಕಣ್ಮರೆಗೂ ನನಗೂ ಯಾವುದೇ ಸಂಬಂಧವಿಲ್ಲ. ಕಡತಗಳ ರಕ್ಷಣೆ ನನ್ನ ಕೆಲಸವಲ್ಲ' ಎಂದು  ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಈ ಹೇಳಿಕೆಯಿಂದ ದೇಶದ ಆಡಳಿತದ ಹೊಣೆಯನ್ನೇ ಹೊತ್ತಿರುವ ಪ್ರಧಾನಿಯವರು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ಸಾಧ್ಯವಿಲ್ಲ.

ಕಡತವನ್ನು ಕಾಣೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅವರ ಕರ್ತವ್ಯವಲ್ಲವೆ ? ಕಡತಗಳ ರಕ್ಷಣೆ ಸಾಧ್ಯವಾಗದಿದ್ದರೂ ಅದನ್ನು ನಾಪತ್ತೆ ಮಾಡಿರುವವರ ರಕ್ಷಣೆಯಂತೂ ಆಗಿದೆ.  ದೇಶದ ಪ್ರಧಾನಿಯಾಗಿ ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳನ್ನು ಅವರೇ ಗಮನಿಸಲು ಸಾಧ್ಯವಿಲ್ಲ.  ಆದರೆ ಕಲ್ಲಿದ್ದಲು ಹಗರಣ ಉಪೇಕ್ಷಿಸುವಂತಹ ಸಣ್ಣ ವಿಷಯವಲ್ಲ.

ದಿನದಿಂದ ದಿನಕ್ಕೆ ರೂಪಾಯಿ ಅಪಮೌಲ್ಯಗೊಳ್ಳುತ್ತಿದೆ.  ಚಿನ್ನದ ಬೆಲೆ ಆಕಾಶದತ್ತ ಮುಖ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ.

  ಜನಸಾಮಾನ್ಯರ ಬದುಕು ಹದಗೆಡುತ್ತಿದೆ.  ಪ್ರತಿಪಕ್ಷಗಳ ನ್ಯಾಯಸಮ್ಮತವಾದ ಟೀಕೆಯನ್ನು ಗಣನೆಗೆ ತೆಗೆದುಕೊಂಡು ಪರಿಹಾರವನ್ನು ಕಂಡುಹಿಡಿಯುವ ಬದಲು, ಪ್ರತಿಪಕ್ಷಗಳು ಅಧಿಕಾರ ಕಳೆದುಕೊಂಡು ಕಂಗೆಟ್ಟಿವೆ ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಸರಕಾರದ ಅದಕ್ಷತೆಯನ್ನು ಮುಚ್ಚಿ ಜನರ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ. ಆಡಳಿತ ವೈಫಲ್ಯದಿಂದ ನಿಜವಾಗಿಯೂ ಕಂಗೆಟ್ಟಿರುವವರು ಜನಸಾಮಾನ್ಯರು. ಕೂಡಲೇ ಚುನಾವಣೆಯನ್ನು ಘೋಷಿಸಿ ಪ್ರಧಾನಿಯವರು ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. 
                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.