ಉತ್ತರ ಕರ್ನಾಟಕದಲ್ಲಿ ಕ್ವಿಂಟಲ್ಗೆ ₹ 6000 ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವುದನ್ನು ಫೆಬ್ರುವರಿಯಲ್ಲಿ ಆರಂಭಿಸಲಾಗಿತ್ತು. ತೊಗರಿ ಮಂಡಳಿಯವರು ಮೊದಲ ವಾರದಲ್ಲಿ ಸುಮಾರು 17 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಿದರು. ಆನಂತರ ‘ಕೇಂದ್ರ ಸರ್ಕಾರವು 16.5 ಲಕ್ಷ ಕ್ವಿಂಟಲ್ ಖರೀದಿಯ ಮಿತಿ ಹೇರಿದೆ’ ಎಂದು ಹೇಳಿ ಖರೀದಿಯನ್ನೇ ನಿಲ್ಲಿಸಿದ್ದರು.
‘ರೈತರು ಪ್ರತಿಭಟನೆಗೆ ಇಳಿದ ನಂತರ ಕೇಂದ್ರ ಸರ್ಕಾರವು ಮತ್ತೆ 99,450 ಟನ್ ಖರೀದಿಗೆ ಅನುಮತಿ ನೀಡಿದೆ’ ಎಂದು ವರದಿಯಾಗಿದೆ (ಪ್ರ.ವಾ., ಫೆ. 23). ಆದರೆ ಅಷ್ಟು ಪ್ರಮಾಣದಲ್ಲಿ ಖರೀದಿ ನಡೆಯಲಿಲ್ಲ. ಇದರಿಂದಾಗಿ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹ 4000 ಬೆಲೆಯಲ್ಲಿ ಮಾರಾಟ ಮಾಡಬೇಕಾಗಿದೆ. ಇದರಿಂದ ರೈತರಿಗೆ ಹಾನಿಯಾಗುವುದಿಲ್ಲವೇ?
ಇದೆಂತಹ ರೈತಪರ ನೀತಿ? ರೈತರನ್ನು ವ್ಯಾಪಾರಿಗಳ ಕೈಗೆ ಸಿಲುಕಿಸುವುದು ಸರ್ಕಾರದ ಉದ್ದೇಶವೇ? ನಮ್ಮಲ್ಲಿ ಹೆಚ್ಚು ಬೆಳೆದ ಬೇಳೆಕಾಳುಗಳನ್ನು ಪರದೇಶಗಳಿಗೆ ರಫ್ತು ಮಾಡಿ ಉತ್ತಮ ಬೆಲೆ ಸಿಗುವಂತೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಕೇಂದ್ರ ನಿಗದಿ ಮಾಡಿದ ಪ್ರಮಾಣದಲ್ಲಿ ರಾಜ್ಯ ಸರ್ಕಾರವಾದರೂ ಖರೀದಿ ಮಾಡ ಬಾರದೇ? ರೈತರನ್ನು ಈ ರೀತಿ ಗೋಳಾಡಿಸುವುದೇಕೆ?
–ಸಂಗಪ್ಪ ಎನ್. ಗಾಣಿಗೇರ, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.