ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು `ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಗಾಂಧೀಜಿ ಮತ್ತು ಕಾಂಗ್ರೆಸ್ನಿಂದಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಯಿಂದ. ಗಾಂಧೀಜಿ, ಕಾಂಗ್ರೆಸ್ ಮತ್ತು ಅಹಿಂಸಾ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲಾಯಿತು ಎಂದು ಹೇಳುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸಲಾಗುತ್ತಿದೆ~ ಎಂದು ಪ್ರತಿಪಾದಿಸಿದ್ದಾರೆ (ಪ್ರ ವಾ, ಜ.1).
ನೇತಾಜಿಯವರ ಸೇವೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅವರು ದೇಶದ ಯುವಶಕ್ತಿಗೆ ಚೈತನ್ಯ ತುಂಬಿದ ಮಹಾನ್ ವ್ಯಕ್ತಿ. ಅವರ ಶಕ್ತಿ ಮತ್ತು ಪ್ರಬಲ ಹೋರಾಟದ ಅರಿವು ಬ್ರಿಟಿಷ್ ಸರ್ಕಾರಕ್ಕೆ ಇತ್ತು.
ಅದರ ಜೊತೆಯಲ್ಲಿಯೇ ಸಾಮಾನ್ಯರಿಂದ ಅಸಾಮಾನ್ಯವರೆಗೆ, ಅವಿದ್ಯಾವಂತನಿಂದ ವಿದ್ಯಾವಂತರವರೆಗೆ ಎಲ್ಲರ ಮೇಲೂ ಪ್ರಭಾವ ಬೀರಿದವರು ಗಾಂಧೀಜಿ ಮತ್ತು ಕಾಂಗ್ರೆಸ್ ಎಂಬುದನ್ನು ಮರೆಯಲು ಸಾಧ್ಯವೇ?
ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ದೇಶದ ವಿದ್ಯಾರ್ಥಿಗಳು ಶಾಲಾ - ಕಾಲೇಜು ತೊರೆದು ಬೀದಿಗಿಳಿದು ಹೋರಾಟ ನಡೆಸಿದರು ಎಂಬುದನ್ನು ಮರೆಯಲು ಸಾಧ್ಯವೇ? ಅಷ್ಟೇ ಅಲ್ಲ, ದೇಶದ ಉದ್ದಗಲದಲ್ಲಿ ಎಲ್ಲ ವಯೋಮಾನದ ಜನರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರು.
ಭೈರಪ್ಪನವರು ವಸ್ತುಸ್ಥಿತಿಯನ್ನು ಮರೆತು ತಮ್ಮದೇ ಲಹರಿಯಲ್ಲಿ ಅರ್ಧ ಸತ್ಯದ ಹೇಳಿಕೆ ಕೊಟ್ಟು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.