ಬೆಂಗಳೂರಿನಲ್ಲಿ ವಿಪರೀತ ಮಳೆ ಸುರಿಯುತ್ತಿದ್ದಾಗಲೂ ಕೆಲಸ ಮಾಡುತ್ತಿದ್ದ ಕಾರ್ಮಿಕ ಶಾಂತಕುಮಾರ್ ಆಯತಪ್ಪಿ ಬಿದ್ದು, ಮಳೆನೀರಿನಲ್ಲಿ ಕೊಚ್ಚಿಹೋದುದು ಬೇಸರ ಮೂಡಿಸುವಂಥದ್ದು. ಅವರ ಕರ್ತವ್ಯಪ್ರಜ್ಞೆ ಎಲ್ಲರಿಗೂ ಮಾದರಿ.
ಆದರೆ ‘ಶಾಂತಕುಮಾರ್ ಅವರ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರು ಹೇಳಿರುವುದು (ಪ್ರ.ವಾ., ಮೇ 22) ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ನೌಕರರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ.
ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊಚ್ಚಿಹೋದ ಕಾರ್ಮಿಕನನ್ನು ಕೇವಲವಾಗಿ ಕಾಣುವುದು ಶೋಭೆ ತರುವುದಿಲ್ಲ. ಸಚಿವರು ದುಡುಕಿನ ಹೇಳಿಕೆ ಹಿಂಪಡೆದು, ಆ ವ್ಯಕ್ತಿಯನ್ನು ಗೌರವಿಸಲಿ.
ಸತ್ಯಬೋಧ, ಬೆಂಗಳೂರು