ADVERTISEMENT

ದೂರದೃಷ್ಟಿ ಇಲ್ಲದ ನಾಯಕರು

ಶ್ರಿನಿವಾಸ ಕಾರ್ಕಳ, ಮಂಗಳೂರು
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಪಶ್ಚಿಮ ಘಟ್ಟ ಪ್ರದೇಶದ 10 ಪ್ರಮುಖ ತಾಣಗಳನ್ನು ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ತಥಾಕಥಿತ ಕೆಲವು ಜನಪ್ರತಿನಿಧಿಗಳು ವ್ಯಕ್ತಪಡಿಸಿರುವ ವಿರೋಧವನ್ನು ಗಮನಿಸಿದಾಗ ಇವರಿಗೆ ದೇಶ ಮತ್ತು ರಾಜ್ಯದ ಬಗೆಗೆ ಯಾವುದೇ ದೂರದೃಷ್ಟಿಯಿಲ್ಲದವರು ಎನ್ನುವುದು ಸಾಬೀತಾಗಿದೆ.

ಹಾಗೆ ನೋಡಿದರೆ, ಈ ಮಂದಿ ಸದರಿ ಪ್ರಸ್ತಾವವನ್ನು ವಿರೋಧಿಸಿರುವುದರಲ್ಲಿ ಅಂತಹ ಅಚ್ಚರಿಯೇನೂ ಇಲ್ಲ. ಯಾಕೆಂದರೆ, ಇವರಲ್ಲಿ ಬಹುತೇಕ ಮಂದಿ ಒಂದಿಲ್ಲೊಂದು ಉದ್ಯಮ ವ್ಯವಹಾರಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿರುವವರು.

ತಮ್ಮ ಹಿತಾಸಕ್ತಿಯ ಬಗ್ಗೆ ಅವರು ಮೊದಲ ಆದ್ಯತೆ ನೀಡುವುದು ಸಹಜವೇ ಆಗಿದೆ. ಪಶ್ಚಿಮ ಘಟ್ಟದಲ್ಲಿ  `ಅಭಿವೃದ್ಧಿ~ ಮಾಡಲು ತೊಡಕಾಗುತ್ತದೆ ಎಂದು ಇವರು ಎಬ್ಬಿಸುತ್ತಿರುವ ಹುಯಿಲು ಈ ವ್ಯಾಪಾರ ವ್ಯವಹಾರ ಹಿತಾಸಕ್ತಿಯ ಮುಂದುವರಿದ ಭಾಗ ಎಂಬುದು ಯಾರಿಗೇ ಆದರೂ ಅರ್ಥವಾಗುವಂಥದ್ದೇ.

ಕೇವಲ ಚುನಾವಣೆಗಳನ್ನು ಗೆಲ್ಲುವುದು, ಅಭಿವೃದ್ಧಿಯ ಹೆಸರಿನಲ್ಲಿ ದುಡ್ಡು ಹೊಡೆಯುವುದನ್ನೇ ಜನಸೇವೆ ಎಂದು ಪರಿಗಣಿಸಿ ಆ ಹಾದಿಯಲ್ಲಿ ನಿಷ್ಠೆಯಿಂದ ನಡೆಯುತ್ತಿರುವ, ಕಿಂಚಿತ್ತಾದರೂ ಪ್ರಬುದ್ಧ ಚಿಂತನೆಯನ್ನಾಗಲಿ ದೂರದೃಷ್ಟಿಯನ್ನಾಗಲಿ ಹೊಂದಿರದ ಇಂತಹ ರಾಜಕಾರಣಿಗಳು ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕು ಅವುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ನಿರೀಕ್ಷಿಸುವ ನಾವೇ ಮೂರ್ಖರು.

 ನಮ್ಮ ಜುಟ್ಟನ್ನು ಯುನೆಸ್ಕೋದ ಕೈಗೆ ಏಕೆ ಕೊಡಬೇಕು ಎಂದು ಈ ಮಂದಿ ಪ್ರಶ್ನಿಸುತ್ತಾರೆ. ವಾಸ್ತವದಲ್ಲಿ ಅಭಿವೃದ್ಧಿಯ ನಿಜ ಅರ್ಥವನ್ನಾಗಲಿ, ಪರಿಸರದ ಮಹತ್ವವನ್ನಾಗಲಿ ಅರಿಯದ ಈ ಮಂದಿಯ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.