ADVERTISEMENT

ಪುತ್ತಿಗೆಶ್ರೀ ಬಹಿಷ್ಕಾರ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ನಾನು ನಾಲ್ಕು ವರ್ಷ ಅಮೆರಿಕದಲ್ಲಿದ್ದು ಈಗ ಮರಳಿ ತಾಯಿನಾಡಿಗೆ ಬಂದಿರುವೆ. ಅಮೆರಿಕದಲ್ಲಿ ಪ್ರತಿ ವರ್ಷ ನಮ್ಮ ತಂದೆಯ ಶ್ರಾದ್ಧ ಮತ್ತು ಮನೆಯಲ್ಲಿ ನಾಮಕರಣ, ಚೌಲ, ಹೋಮ ಹವನಕ್ಕಾಗಿ ಪರದಾಡಿದ ಪರಿ ಯಾರಿಗೂ ಬೇಡ.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಪ್ರತಿಷ್ಠಾಪಿಸಿದ ನ್ಯೂ ಜರ್ಸಿಯ ಶ್ರೀಕೃಷ್ಣ ವೃಂದಾವನ, ಅರಿಜೋನ ಮತ್ತು ಕಾಲಿಫೋರ್ನಿಯಾದಲ್ಲಿದ್ದ ನನ್ನಂಥ ಸಾವಿರಾರು ಜನಗಳಿಗೆ ಸಂಸ್ಕೃತಿ ಉಳಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ.

ಅಲ್ಲಿ ಗೀತಾ ಪಾಠ, ಸಂಸ್ಕೃತ ಬೋಧನೆ, ಮಕ್ಕಳಿಗೆ ಶ್ಲೋಕಪಾಠ, ಬಂದ ಎಲ್ಲ ಭಕ್ತರಿಗೂ ಭೋಜನ- ಎಲ್ಲವೂ ಶುಲ್ಕರಹಿತ. ಇಂತಹ ಸಾಧಕರನ್ನು ನೋಯಿಸಿ ಪರ್ಯಾಯಕ್ಕೆ ಬಹಿಷ್ಕಾರ ಹಾಕಿರುವುದು ಸಮಂಜಸವಲ್ಲ. ಶ್ರೀರಾಮ ಸಮುದ್ರ ದಾಟಿರಲಿಲ್ಲವೇ? ಹಾಗಾದರೆ ಅವನಿಗೇಕೆ ಪೂಜೆ? ಗೀತಾಸಾರ, ರಾಮಾಯಣ, ಮಹಾಭಾರತ, ಸ್ಕಂದ ಪುರಾಣ ಇವೆಲ್ಲವನ್ನು ಜಗತ್ತಿಗೆ ಪರಿಚಯಿಸಿದರಲ್ಲವೆ ನಮ್ಮ ಧರ್ಮದ ಬಗೆಗೆ ವಿದೇಶಿಯರಿಗೆ ತಿಳಿಯಲು ಸಾಧ್ಯ?

ಹಿಂದು ಧರ್ಮದ ಆಚರಣೆ ಬರಿ ಉಡುಪಿ, ಕರ್ನಾಟಕ ಅಥವಾ ಭಾರತ ದೇಶಕ್ಕೆ ಸೀಮಿತವಾಗಿರದೆ ವಿಶ್ವ ವಿಖ್ಯಾತವಾಗಲು ಸುಗುಣೇಂದ್ರ ತೀರ್ಥರ ಪ್ರಯತ್ನ ಮೊದಲ ಹೆಜ್ಜೆ. ಈ ವಾಸ್ತವವನ್ನು ಅರ್ಥಮಾಡಿಕೊಂಡು ಅವರಿಗೆ ಹಾಕಿದ ಬಹಿಷ್ಕಾರ ರದ್ದುಗೊಳಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.