ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳು, ಸುಧಾರಣೆಗಳು ಆಗುತ್ತಲಿದ್ದರೂ ಪುರುಷ ವರ್ಗದ ಮನಸ್ಥಿತಿ ಬದಲಾಗಿಲ್ಲ. ಮಹಿಳಾ ದಿನಾಚರಣೆ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿದ್ದ ಎಚ್.ಟಿ. ಸಾಂಗ್ಲಿಯಾನ ಉದುರಿಸಿದ ನುಡಿಮುತ್ತುಗಳೇ ಇದಕ್ಕೆ ಜೀವಂತ ಸಾಕ್ಷಿ. ಅವರು ಎಷ್ಟೊಂದು ಅಪ್ರಬುದ್ಧರು ಎಂಬುದಕ್ಕೂ ಈ ಮಾತು ನಿದರ್ಶನವಾಗಿ ನಿಲ್ಲುತ್ತದೆ. ‘ತಾಯಿಯೇ ಇಷ್ಟು ಸುಂದರ ಮೈಕಟ್ಟಿನವರಿರುವಾಗ ನಿರ್ಭಯಾ ಇನ್ನೆಷ್ಟು ಚೆನ್ನಾಗಿ ಕಾಣುತ್ತಿದ್ದಿರಬಹುದು...’ ಎಂದು ಹೇಳಿರುವುದು ನಿಜಕ್ಕೂ ನಾಚಿಕೆಗೇಡು.
ಅವರು, ಪೊಲೀಸ್ ಇಲಾಖೆಯಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದವರು. ಅಂತಹವರು, ‘ಯಾರಾದರೂ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಬಂದರೆ ಮಹಿಳೆ ಸುಮ್ಮನೇ ಶರಣಾಗಿಬಿಡಬೇಕು. ಕೊಲೆಯಾಗುವುದನ್ನು ತಪ್ಪಿಸಿಕೊಳ್ಳಬೇಕು...’ ಮುಂತಾಗಿ ಹೇಳಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ. ಅನ್ಯಾಯವನ್ನು ಎದುರಿಸುವ ಶಕ್ತಿ–ಯುಕ್ತಿಗಳನ್ನು ಮಹಿಳೆಯರಿಗೆ ತಿಳಿಸಬೇಕಾದವರು, ಈ ರೀತಿ ಹೇಡಿಗಳಾಗಿ ಎಂದು ಹೇಳಿರುವುದು ಶೋಚನೀಯ. ಭಾರತೀಯ ಮಹಿಳೆ ಸಹನೆಯ ಸಾಕಾರಮೂರ್ತಿ ಎಂಬುದು ನಿಜ. ಆದರೆ, ಅತ್ಯಾಚಾರ ಎಸಗುವವರಿಗೆ ‘ಕಾಳಿ’ ಆಗುವಳೆಂಬುದನ್ನು ಸಾಂಗ್ಲಿಯಾನ ತಿಳಿಯಬೇಕು.
ಬಸವರಾಜ ಡಿ. ಕುಡಚಿ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.