ADVERTISEMENT

ಬಿಜೆಪಿಯ ದುಡುಕು

ಸಾಮಗ ದತ್ತಾತ್ರಿ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಎಲ್.ಕೆ.ಅಡ್ವಾಣಿಯವರು ನೀಡಿದ ರಾಜೀನಾಮೆ ಕ್ರಮ ಒಂದರ್ಥದಲ್ಲಿ ಅಚ್ಚರಿಯೂ ಅಲ್ಲ ಅನಿರೀಕ್ಷಿತವೂ ಅಲ್ಲ. ಒಂದು ಸಂಘಟನೆಗಾಗಿ ಅಹರ್ನಿಶಿ ದುಡಿದು ಅದನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೇರುವಷ್ಟರ ಮಟ್ಟಿಗೆ ಅದನ್ನು ತಂದ ಅತ್ಯಂತ ಪ್ರಮುಖರಲ್ಲಿ ಅಡ್ವಾಣಿ ಅಗ್ರಗಣ್ಯರು. ಇವರ ಕಣ್ಣೆದುರಿನಲ್ಲೇ ಎರಡನೆಯ ಹಂತದ ನಾಯಕರೆನಿಸಿಕೊಂಡವರು ಪಕ್ಷದಲ್ಲಿ ಪ್ರಾಮುಖ್ಯ ಪಡೆದು ಅದನ್ನು ನಡೆಸಿಕೊಂಡು ಬರುತ್ತಿದ್ದುದನ್ನು ನೋಡಿದಾಗ ಬಿಜೆಪಿಯ ಮಹತ್ವದ ದಿನಗಳು ಸಂದು ಹೋದವೆನ್ನಬೇಕು.

ಅದು ಆಗುವುದೇ ಹಾಗೆ! ಪಕ್ಷವೊಂದನ್ನು ಕಟ್ಟಿ ಬೆಳೆಸಿದವರು ಅದು ಜನಮನ್ನಣೆ ಪಡೆದು ಆಡಳಿತ ರೂಢವಾಗುವ ಹೊತ್ತಿಗೆ ಬದುಕಿನಲ್ಲಿ ಮುಸ್ಸಂಜೆಯಲ್ಲಿರುತ್ತಾರೆ! ಇವರ ಮಾತು ಅನಂತರದ ಪೀಳಿಗೆಯವರಿಗೆ ಅಷ್ಟಕ್ಕಷ್ಟೆ. ಸಿದ್ಧಪಡಿಸಿದ ಆಹಾರವನ್ನು ಮೆಲ್ಲುವವರು ಈ ಪೀಳಿಗೆಯವರು. ಕಾಂಗ್ರೆಸ್ ಸ್ಥಿತಿಯೂ ಇದಕ್ಕಿಂತ ಬೇರೆ ಅಲ್ಲ. ಅದು ಕೂಡ ಈಗ ಜಳ್ಳಾಗಿದೆ.

ಅಡ್ವಾಣಿ ರಾಜೀನಾಮೆಗೆ ಪ್ರಮುಖ ಕಾರಣದ ಬಗ್ಗೆ ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ. ಅವರಿಗೆ ಪ್ರಧಾನಿಯಾಗಬೇಕೆಂಬ ಹಂಬಲ; 85 ವರ್ಷದ ಅವರ ಈ ಹಂಬಲವನ್ನು ಪೂರೈಸುವುದು ಆಗದು ಎಂದು ಪಕ್ಷದ ಅನಂತರದ ಪೀಳಿಗೆಯವರ ವಿಚಾರವಾಗಿತ್ತು ಮೋದಿ ಗಟ್ಟಿಗ ನಿಜ. ಆದರೆ, ಎಷ್ಟರ ಮಟ್ಟಿಗೆ ಪ್ರಜಾಪ್ರಭುತ್ವವಾದಿ? ಎನ್‌ಡಿಎನಲ್ಲಿ ಇವರು ಒಲ್ಲದ ವ್ಯಕ್ತಿ. ಆದದ್ದಾಗಲಿ ಎಂದು ಬಿಜೆಪಿ ದುಡುಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.