ಬಿಜೆಪಿ, ತನ್ನ ಬೆನ್ನಿಗೆ ಅಂಟಿಕೊಂಡಿರುವ ಕಳಂಕವನ್ನು ಯಾರೂ ನೋಡಿರಲಾರರೆಂದು ಭ್ರಮಿಸಿ ಸಿವಿಸಿ ಥಾಮಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದೆ.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಅಂದಿನ ಗೃಹ ಸಚಿವ ಅಡ್ವಾಣಿಯವರ ಹೆಸರನ್ನು ‘ಪಿತೂರಿಕಾರರ ಪಟ್ಟಿ’ಯಿಂದ ತೆಗೆದುಹಾಕಿದ ಸಿಬಿಐ ನಿರ್ದೇಶಕ ಪಿ.ಸಿ. ಶರ್ಮರವರ ‘ಋಣ’ ತೀರಿಸಲು ಅವರ ನಿವೃತ್ತಿಯ ನಂತರ, ಕಾನೂನಿನ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ (ಆ ಹುದ್ದೆಯನ್ನು ಎಂಟು ತಿಂಗಳು ಖಾಲಿ ಇರಿಸಿ) ಅಂದಿನ ಎನ್ಎಚ್ಆರ್ಸಿ ಅಧ್ಯಕ್ಷ ಎ.ಎಸ್. ಆನಂದ್ರವರ ವಿರೋಧದ ನಡುವೆಯೂ ನೇಮಿಸಲಾಯಿತು (ಸದಸ್ಯತ್ವ ನಿವೃತ್ತ ನ್ಯಾಯಾಧೀಶರಿಗೆ ಕಾದಿರಿಸಿದೆ).
ಅಷ್ಟೇ ಅಲ್ಲ, ಸದಸ್ಯರಾಗಿದ್ದೂ, ಇಂಟರ್ಪೋಲ್ನ ಉಪಾಧ್ಯಕ್ಷರಾಗಿದ್ದೇ (ಕಾನೂನು ವಿರುದ್ಧ ಒಂದು ಹುದ್ದೆ, ಒಬ್ಬ ವ್ಯಕ್ತಿ) ಅಲ್ಲದೆ ಅಧ್ಯಕ್ಷರ ವಿರೋಧವಿದ್ದರೂ ವಿದೇಶ ಪ್ರವಾಸ ಮಾಡಿದ ಖರ್ಚು ವೆಚ್ಚವನ್ನು ಸಿಬಿಐನಿಂದ ಪಡೆದರು. ಮತ್ತೊಂದು ಪ್ರಕರಣದಲ್ಲಿ, ವಾಜಪೇಯಿ ಸರ್ಕಾರ ಎನ್ಫೋರ್ಸ್ಮೆಂಟ್ ಡೈರೆಕ್ಟರ್ ಬೇಜ್ ಬರುವಾ ಅವರನ್ನು ‘ಎತ್ತಂಗಡಿ’ ಮಾಡಿದ ಸಂದರ್ಭದಲ್ಲಿ, ಉಚ್ಚ ನ್ಯಾಯಾಲಯದ ತೀರ್ಪಿನ ‘ನಾಲ್ಕು ವಾಕ್ಯ’ಗಳನ್ನೇ ತೆಗೆದುಹಾಕಿ ‘ನೀವು ಹೇಳಿದಂತೆ’ ನಡೆದುಕೊಂಡಿದ್ದೇವೆ ಎಂದು ‘ಸುಳ್ಳು ಹೇಳಿ’ ಸಿಕ್ಕಿಹಾಕಿಕೊಂಡು ನ್ಯಾಯಾಲಯದಿಂದ ಛೀಮಾರಿಯನ್ನೂ ಹಾಕಿಸಿಕೊಂಡಿದ್ದರು. ಬಿಜೆಪಿಯವರು ಈ ಇತಿಹಾಸವನ್ನೆಲ್ಲ ಏಕೆ ಮರೆಯುತ್ತಿದ್ದಾರೆ ತಿಳಿಯದು.
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.