ಡಾ. ಸಿ.ಎಸ್. ದ್ವಾರಕಾನಾಥ್ ಅವರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಬುಡ್ಗ ಜಂಗಮ ಜಾತಿಯ ಬಗ್ಗೆ ಬಹಳ ವರ್ಷಗಳಿಂದ ಹೊಸ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿರುವುದು ವಿಶೇಷ ಸಂಗತಿಯಾಗಿ ಕಾಣಿಸುವುದಿಲ್ಲ. (ಪ್ರ.ವಾ. ವಾಚಕರ ವಾಣಿ ದಿ. 11/6/2012)
ಹಿಂದುಳಿದ ವರ್ಗದ ಪಟ್ಟಿಯಲ್ಲಿ ವರ್ಗೀಕರಣಗೊಂಡಿರುವ ಯಾವುದೇ ಜಾತಿಗಳು ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಲು, ಒತ್ತಾಯ ಮಾಡಲು ಸಂವಿಧಾನಬದ್ಧ ಹಕ್ಕನ್ನು ಪಡೆದಿರುತ್ತವೆ.
ಆದರೆ ಈಗಾಗಲೇ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳಿಗೆ ಸಮಾನ ಶಬ್ದಗಳನ್ನು ಸೇರಿಸುವ, ಸಾಮ್ಯ ಶಬ್ದಗಳನ್ನು ಸಮೀಕರಿಸುವ ಅಧಿಕಾರ ಹಿಂದುಳಿದ ವರ್ಗದ ಆಯೋಗಕ್ಕಾಗಲೀ, ರಾಜ್ಯ ಸರ್ಕಾರಕ್ಕಾಗಲೀ ಇರುವುದಿಲ್ಲ.
ಭೈರಾಗಿ, ಬಾವಾಚ, ಬುರ್ರಕಥೆಯವರು, ಬಹುರೂಪಿಗಳು, ಹಗಲು ವೇಷಗಾರ, ಕೊಂಡಮಾಮ, ಮಾಲ ಸನ್ಯಾಸಿ, ಜಗ್ಗಾಲಿ ಜಾತಿಗಳು ಒಂದೇ ಜಾತಿಯ ಸಮಾನ ಶಬ್ದಗಳಾಗಿದ್ದರೆ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿರುವ ಜಗ್ಗಾಲಿ ಮತ್ತು ಮಾಲಸನ್ಯಾಸಿ ಜಾತಿಗೆ ಭೈರಾಗಿಗಳು ಸೇರಿದ್ದಾರೆಂದು ಜಗ್ಗಾಲಿ, ಮಾಲ ಸನ್ಯಾಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು ಭೈರಾಗಿ ಜಾತಿ ಜನರಿಗೆ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಕೊಡಿಸಬಹುದಾಗಿತ್ತು.
ಬುಡ್ಗ ಜಂಗಮ (ಬೇಡ ಜಂಗಮ) ಮಾಲ ಸನ್ಯಾಸಿ, ಜಗ್ಗಾಲಿ ಜಾತಿಗಳು ಬೇರೆ ಬೇರೆ ಜಾತಿಗಳಾಗಿದ್ದು ಪ್ರತಿಯೊಂದು ಜಾತಿಗಳನ್ನು ಬೇರೆ ಬೇರೆ ಕ್ರಮ ಸಂಖ್ಯೆಗಳಲ್ಲಿ ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಇಲ್ಲದಿದ್ದರೆ ಬುಡ್ಗ ಜಂಗಮ, ಮಾಲ ಸನ್ಯಾಸಿ, ಬೇಡ (ಬುಡ್ಗ) ಜಾತಿಗಳನ್ನು ಒಂದೇ ಜಾತಿಗಳೆಂದು ಅವೆಲ್ಲಾ ಬೇಡ (ಬುಡ್ಗ) ಜಂಗಮ ಜಾತಿಯ ಸಮಾನಶಬ್ದಗಳೆಂದು ಪರಿಶಿಷ್ಟ ಜಾತಿಗಳ ಪಟ್ಟಿಯ 19 ನೇ ಕ್ರಮ ಸಂಖ್ಯೆಯಲ್ಲಿ ಒಂದೇ ಜಾತಿಯೆಂದು ನಮೂದಿಸಬೇಕಿತ್ತು.
ಪರಿಶಿಷ್ಟ ಜಾತಿಗಳ ಬಗ್ಗೆ ಸಮಾನ (ಸಿನಾನಿಮ್ಸ) ಶಬ್ದಗಳನ್ನು ಕೊಡುವ, ವಿಶ್ಲೇಷಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇರುತ್ತದೆ. ಅವುಗಳನ್ನು ಘೋಷಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇದೆ.
ಡಾ. ದ್ವಾರಕಾನಾಥ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ 7-7-2010 ರಂದು ಸರ್ಕಾರಕ್ಕೆ ಒಂದು ಶಿಫಾರಸ್ಸು ಮಾಡಿ ತಕ್ಷಣ ಜಾರಿಗೆ ಬರುವಂತೆ ಸಲಹೆ ನೀಡಿರುವುದು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರದ ವ್ಯಾಪ್ತಿಯನ್ನು ಮೀರಿದ ಅಚಾತುರ್ಯ ಕೆಲಸವಾಗಿದೆ.
9-4-2012 ರಂದು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ಭೈರಾಗಿ ಜನಾಂಗದವರಿಗೆ ಬುಡ್ಗ ಜಂಗಮ ಎಂಬ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬಾರದೆಂದು ಆದೇಶ ಹೊರಡಿಸಿರುವುದು ಸಾಮಾಜಿಕ ಕಳಕಳಿಯುಳ್ಳ ಕಾನೂನುಬದ್ಧ ನಿರ್ದೇಶನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.