ADVERTISEMENT

ಬೆಲೆ ಏರಿಕೆಯ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರೂ. ಏರಿಕೆಯಾದ ಮರುದಿನವೇ ಹೋಟೆಲ್‌ಗಳ ಮಾಲೀಕರು 100 ಮಿ.ಲೀ.ಗಿಂತ ಕಡಿಮೆ ಇರುವ ಒಂದು ಕಪ್ ಕಾಫಿ ಮತ್ತು ಟೀ ಬೆಲೆಯನ್ನು 2 ರೂಗಳಿಂದ ಐದು ರೂಪಾಯಿಗಳಿಗೆ ಏರಿಸಿದರು. ಹಾಲು ಬಳಸಿ ತಯಾರಿಸುವ ಎಲ್ಲ ಸಿಹಿ ತಿಂಡಿಗಳ ಬೆಲೆಯೂ ಏರಿಕೆಯಾಯಿತು.

 ಈರುಳ್ಳಿ ಬೆಲೆ ಈಗ  ಪಾತಾಳಕ್ಕೆ ಕುಸಿದಿದೆ. ಭತ್ತಕ್ಕೆ ಬೆಂಬಲ ಬೆಲೆ ಸಿಗದೆ ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತೊಗರಿ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರು ಸರ್ಕಾರದ ಖರೀದಿ ಕೇಂದ್ರಗಳ ಮುಂದೆ ಕೈ ಕಟ್ಟಿ ಕುಳಿತಿರುವುದಷ್ಟೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ.

ಆದರೆ ಧಾನ್ಯಗಳು, ತರಕಾರಿಗಳ ಬೆಲೆ ಕುಸಿದಾಗ ಹೋಟೆಲ್ ತಿಂಡಿ ಪದಾರ್ಥಗಳ ಬೆಲೆಯಲ್ಲಿ ಮಾಲೀಕರು ಐದು ಪೈಸೆಯಷ್ಟನ್ನೂ ಸಹ ಇಳಿಕೆ ಮಾಡಿಲ್ಲ. `ಬೆಂದ ಮನೆಯಲ್ಲಿ ತಿಂದವನೇ ಜಾಣ~ ಎಂಬಂತೆ ಹೋಟೆಲ್ ಮಾಲೀಕರು ವರ್ತಿಸುತ್ತ ತಮ್ಮ ನೈತಿಕ ಹೊಣೆಗಾರಿಕೆಯನ್ನೇ ಮರೆತಿದ್ದಾರೆ.

ಬೆಲೆ ಹೆಚ್ಚಳದ ಹೊರೆಯನ್ನು ಗ್ರಾಹಕರ ಮೇಲೆ ಹೇರಲು ತೋರುವ ಉತ್ಸಾಹವನ್ನು ತೋರುವ ಹೊಟೇಲ್ ಮಾಲೀಕರು ಬೆಲೆ ಇಳಿಕೆಯಿಂದ ತಮಗಾದ ಹೆಚ್ಚುವರಿ ಲಾಭವನ್ನು ಗ್ರಾಹಕರಿಗೆ ಹಂಚುವ ಉದಾರತೆ ತೋರಬೇಕಲ್ಲವೇ?

ಬಿಜೆಪಿ ಸರ್ಕಾರಕ್ಕೆ ಯಾರ ಮೇಲೂ ನಿಯಂತ್ರಣ ಇಲ್ಲ. ಮನಸ್ಸಿಗೆ ಬಂದಂತೆ ತಿಂಡಿ ಪದಾರ್ಥಗಳ ಬೆಲೆ ಹೆಚ್ಚಿಸುವ ಹೋಟೆಲ್‌ಗಳನ್ನು ನಿಯಂತ್ರಿಸುವ ಶಕ್ತಿ ಸರ್ಕಾರಕ್ಕೆ ಇಲ್ಲ. ಸರ್ಕಾರ  ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜನರ ಪರಿಸ್ಥಿತಿಯನ್ನು  ಅರ್ಥ ಮಾಡಿಕೊಳ್ಳಬೇಕು. ಆಹಾರ ಧಾನ್ಯಗಳ ಬೆಲೆ ಇಳಿದಾಗ ತಿಂಡಿಗಳ ಬೆಲೆ ಇಳಿಸಬೇಕಾದ ನೈತಿಕತೆಯನ್ನು ಹೋಟೇಲ್ ಮಾಲೀಕರು ಮೈಗೂಡಿಸಿಕೊಳ್ಳುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.