ADVERTISEMENT

ಭಾರತಕ್ಕೆ ಬೇಕಿದೆ ಸ್ವದೇಶೀವಾದ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಸರ್ಕಾರವು ಬಂಡವಾಳಶಾಹಿ ನೀತಿ ಹಾಗೂ ಎಫ್‌ಡಿಐಗೆ ನೀಡುತ್ತಿರುವ ಪ್ರಾಧ್ಯಾನ್ಯತೆಗಳಿಂದ ದೇಶದ ಅರ್ಥವ್ಯವಸ್ಥೆಗಾಗಬಹುದಾದ ಸಮಸ್ಯೆಗಳಿಂತಿವೆ.

1. ವಿದೇಶಿ ಅಗ್ಗದ ಸರಕು ಮತ್ತು ಸುಧಾರಿತ ತಾಂತ್ರಿಕತೆ ಹರಿದು ಬರುತ್ತಿರುವುದರಿಂದ, ದೇಶದ ಸ್ವದೇಶಿ ಕೈಗಾರಿಕಾ ಮತ್ತು ತಾಂತ್ರಿಕ ಪ್ರಗತಿ ಕುಂಠಿತವಾಗುತ್ತದೆ. ಕಳೆದ ಮಾರ್ಚ್-31ರ ವೇಳೆಗೆ 12.15ಲಕ್ಷ ನೋಂದಾಯಿತ ಕಂಪೆನಿಗಳು ಸ್ಥಗಿತಗೊಂಡಿವೆ.

2.ದೇಶದ ಮಾರುಕಟ್ಟೆಯು ಅಂತರರಾಷ್ಟ್ರೀಯ ಏರಿಳಿತವನ್ನು ಹಾಗೂ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಯುರೋಪಿಯನ್ ಮತ್ತು ಅಮೆರಿಕದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದ ಜವಳಿ ಉದ್ಯಮದಲ್ಲಿ ಕಳೆದೆರಡು ವರ್ಷಗಳಲ್ಲಿ 45ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿರುವುದನ್ನು ನೋಡಬಹುದಾಗಿದೆ.

3.ಕೃಷಿ ಬೆಳವಣಿಗೆ ಕುಂಠಿತವಾಗಿದ್ದು ಗ್ರಾಮೀಣ ಅರ್ಥವ್ಯವಸ್ಥೆ ಕುಸಿದಿರುವುದರಿಂದ ಹಾಗೂ ಸಣ್ಣ, ಮಧ್ಯಮ ಕೈಗಾರಿಕೆಗಳು ನಷ್ಟದಲ್ಲಿರುವುದರಿಂದ ಭಾರತದಲ್ಲಿನ ಎನ್‌ಪಿಎ ಪ್ರಮಾಣ 2011ರ ಡಿಸೆಂಬರ್ ವೇಳೆಗೆ 1.27ಲಕ್ಷ ಕೋಟಿಗೆ ಏರಿದೆ.

4.ಬಂಡವಾಳ ಹಿಂತೆಗೆತ ಅಧಿಕಗೊಂಡರೆ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಎಫ್‌ಡಿಐ ಹೆಚ್ಚಳ ನಮ್ಮ ಸ್ವತಂತ್ರ ವಿದೇಶಾಂಗ ನೀತಿಯ ಮೇಲೂ ಪರಿಣಾಮ ಬೀರಲಿದೆ.

5. ಒರಿಸ್ಸಾ, ಆಂಧ್ರಪ್ರದೇಶ, ಗುಜರಾತ್, ಛತ್ತೀಸ್‌ಗಡ, ಕರ್ನಾಟಕದಂತಹ ನೈಸರ್ಗಿಕ ಸಂಪದ್ಭರಿತ ರಾಜ್ಯಗಳಲ್ಲಿ ಎಫ್‌ಡಿಐ ಹೆಚ್ಚಾಗಿರುವುದು ಹೂಡಿಕೆದಾರರ ಕೊಳ್ಳೆಹೊಡೆಯುವ ಮನಸ್ಥಿತಿಯನ್ನು ತೋರಿಸುತ್ತದೆ.

6. 2011ರಲ್ಲಿ  ಆರ್ಥಿಕ ಸಮಸ್ಯೆಯಿಂದಲೇ ಶೇ.2.2ರಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

7.  2 ಜಿಸ್ಪೆಕ್ಟ್ರಂ, ಕಲ್ಲಿದ್ದಲು, ಕರ್ನಾಟಕದ ಗಣಿ ಹಗರಣಗಳೆಲ್ಲ ಸರ್ಕಾರಗಳ ಬಂಡವಾಳಶಾಹಿ ಧೋರಣೆಯ ಅನೈತಿಕ ಕೂಸುಗಳು. ರೈತರ-ಬಡವರ ಸಬ್ಸಿಡಿಗಳಿಗೆ ವಿರೋಧ ವ್ಯಕ್ತಪಡಿಸುವ ಕೇಳ್ಕರ್ ಅಂತಹ ಸಮಿತಿಗಳು ಉಳ್ಳವರ ಪರವಾದ ಸಬ್ಸಿಡಿಗಳಿಗೇನೂ ಹೇಳಲಾರವು.

8. ಮಾರುಕಟ್ಟೆ ಪೈಪೋಟಿಯಿಂದಾಗಿ ಗ್ರಾಹಕ ಪರವಾಗುವ ಚಿಲ್ಲರೆ ವಹಿವಾಟಿನ ಬೃಹತ್ ಮಳಿಗೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಾರದು. 
ಅಗಾಧ ಮಾನವ ಮತ್ತು ನೈಸರ್ಗಿಕ ಸಂಪತ್ತಿನಿಂದ ಕೂಡಿರುವ  ಭಾರತಕ್ಕೆಬೇಕಿದೆ ಹೆಚ್ಚು ಸಮಾಜವಾದ ಹಾಗೂ ಸ್ವದೇಶೀವಾದದ ನೀತಿಗಳು. 
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.