ADVERTISEMENT

ಮೌಲ್ಯಮಾಪನಕ್ಕೆ ನಿರ್ಲಕ್ಷ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಮೌಲ್ಯಮಾಪನ  ಧಾರವಾಡದಲ್ಲಿ ನಡೆಯುತ್ತಿದ್ದು ಮೌಲ್ಯಮಾಪನ ಕಾರ್ಯ ಹಲವು ಕಾಲೇಜು ಶಿಕ್ಷಕರ ಕರ್ತವ್ಯಭ್ರಷ್ಟತೆಗೆ ಸಾಕ್ಷಿಯಾಗಿದೆ. ಮೌಲ್ಯಮಾಪನ, ಶಿಕ್ಷಕರ ಕಡ್ಡಾಯ ಕರ್ತವ್ಯಗಳಲ್ಲೊಂದೆಂಬ ನಿಯಮ ಎಲ್ಲರಿಗೂ ಅನ್ವಯಿಸುತ್ತಿಲ್ಲ. ಉದಾಹರಣೆಗೆ ಇಂಗ್ಲಿಷ್ ಮೌಲ್ಯಮಾಪನ ಕೇಂದ್ರದ ಮೌಲ್ಯಮಾಪಕರ ಯಾದಿಯಲ್ಲಿರುವ 200 ಕ್ಕೂ ಹೆಚ್ಚು ಉಪನ್ಯಾಸಕರಲ್ಲಿ ಅರ್ಧದಷ್ಟು ಉಪನ್ಯಾಸಕರು ಗೈರು ಹಾಜರಾಗಿದ್ದಾರೆ.

ಇದರಿಂದ ಮೌಲ್ಯಮಾಪನ ಅನಿರ್ದಿಷ್ಟ ಕಾಲ ಮುಂದುವರಿದಿರುವುದರಿಂದ ಕಾಲೇಜು ಆರಂಭವಾಗಿದ್ದರೂ  ವಿದ್ಯಾರ್ಥಿಗಳಿಗೆ ಪಾಠವಿಲ್ಲದಂತಾಗಿದೆ. ಸೆಮಿಸ್ಟರ್ ಪದ್ಧತಿಯಲ್ಲಿ ವರ್ಷಕ್ಕೆರಡು ಬಾರಿ ಮೌಲ್ಯಮಾಪನ ನಡೆಯುವುದರಿಂದ ದೂರದ ಊರುಗಳಿಂದ ಬರುವ ಉಪನ್ಯಾಸಕರು ವರ್ಷದಲ್ಲಿ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ತಮ್ಮ ಸಂಸಾರವನ್ನು ಬಿಟ್ಟು ಇರಬೇಕಾಗಿದೆ.

ಮೌಲ್ಯಮಾಪನದ ಈ ಅನ್ಯಾಯ,ಅವ್ಯವಸ್ಥೆ ಪುನರಾವರ್ತನೆಯಾಗುತ್ತಿದೆಯಾದರೂ ಇದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳದಿರುವುದು ಪ್ರಾಮಾಣಿಕರ ನೈತಿಕತೆಗೆ ಹಿನ್ನಡೆಯಾಗುವಂತೆ ಮಾಡಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಧಿಕಾರಸ್ಥರು ಸ್ವಜನಪಕ್ಷಪಾತ ಧೋರಣೆ ಬಿಡಲಿ. ಮೌಲ್ಯಮಾಪನಕ್ಕೆ ವಿನಾಯತಿ ನೀಡಿದ್ದಲ್ಲಿ ಅದಕ್ಕೆ ಕಾರಣ ಹಾಗೂ ಕೈಗೊಂಡ ಶಿಸ್ತು ಕ್ರಮದ ಸಂಪೂರ್ಣ ಮಾಹಿತಿಯನ್ನು ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.