ಮಾಗಡಿ ಮುಖ್ಯರಸ್ತೆಯ ಉದ್ದಕ್ಕೂ ಅನೇಕ ಕಡೆ ಬಸ್ ನಿಲ್ದಾಣ, ಜನರು ಓಡಾಡುವ ಜಾಗಗಳಲ್ಲಿ ಮೀನಿನ ವ್ಯಾಪಾರಿಗಳು ಮೀನು ಶುಚಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೌಸಿಂಗ್ಬೋರ್ಡ್, ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ವಾರದ ಎಲ್ಲ ದಿನವೂ ಮೀನು ಶುಚಿ ಮಾಡುತ್ತಿರುವುದು ಮಾತ್ರವಲ್ಲ ರಸ್ತೆಯ ಬದಿಯೇ ತ್ಯಾಜ್ಯವನ್ನು ರಾಶಿ ಹಾಕಿರುತ್ತಾರೆ. ಕೊಳಕು ನೀರು ರಸ್ತೆಗೆ ಬಂದು ನಿಂತಿರುತ್ತದೆ.
ಇಡೀ ದಿನ ಇಲ್ಲಿ ಸಂಚರಿಸುವ ಮಂದಿ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ವಿಪರೀತ ನೊಣಗಳ ಕಾಟ. ಬೀದಿನಾಯಿಗಳು ತ್ಯಾಜ್ಯ ತಿನ್ನಲು ಹೊಂಚು ಹಾಕುತ್ತಾ ತೊಂದರೆ ಕೊಡುತ್ತಿವೆ. ಇನ್ನು ತ್ಯಾಜ್ಯವನ್ನು ಮೋರಿಗೆ ಬಿಡುತ್ತಾರೆ. ಹೀಗೆ ಆಗುತ್ತಿರುವ ತೊಂದರೆ ಒಂದೆರಡಲ್ಲ.
ಕಾಮಾಕ್ಷಿ ಪಾಳ್ಯ ಬಸ್ ನಿಲ್ದಾಣದ ಬಳಿಯೇ ಸಾರ್ವಜನಿಕ ಶೌಚಾಲಯವೂ ಇದೆ. ಅದರ ಪಕ್ಕದಲ್ಲಿಯೇ ಮೀನಿನ ಮಾರಾಟ. ಎರಡೂ ಕಡೆಯಿಂದ ಮೂಗಿಗೆ ಬಡಿಯುವ ವಾಸನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಪಾಲಿಕೆಯ ಅಧಿಕಾರಿಗಳು ಜನಸಂದಣಿ ಕಡಿಮೆ ಇರುವ ಕಡೆ ಮೀನಿನ ಅಂಗಡಿಗಳನ್ನು ಎತ್ತಂಗಡಿ ಮಾಡುವ ಅಗತ್ಯವಿದೆ. ಇದರಿಂದ ವ್ಯಾಪಾರಕ್ಕೇನೂ ತೊಂದರೆಯಾಗದು. ಬೇಕಿದ್ದವರು ಜಾಗ ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ನಗರದ ಶುಚಿತ್ವ ಮತ್ತು ಜನರ ಆರೋಗ್ಯದ ದೃಷ್ಠಿಯಿಂದ ಪಾಲಿಕೆ ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.