ADVERTISEMENT

ರಾಜ್ಯಪಾಲರ ಸ್ಥಾನಗೌರವಕ್ಕೆ ಅಪಮಾನ

ಡಾ.ಮ.ನ.ಜವರಯ್ಯ, ಮೈಸೂರು
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವು ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಿರುವ ಲೋಕಾಯುಕ್ತ ಮಸೂದೆ, ಲೋಕಾಯುಕ್ತರ ನೇಮಕಾತಿಯ ಮೂಲ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಈ ಮಸೂದೆಯ ಪ್ರಕಾರ, ಲೋಕಾಯುಕ್ತರ ನೇಮಕಾತಿ ವಿಷಯದಲ್ಲಿ, ಆ ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಸರ್ಕಾರದ ಧೋರಣೆ, ಸಂವಿಧಾನ ನೀತಿಗೆ ಸಂಪೂರ್ಣ ವಿರುದ್ಧವಾಗಿದೆ.

ಇತ್ತೀಚೆಗೆ ಗುಜರಾತ್‌ನ ವಿಧಾನಸಭೆಯಲ್ಲಿ ಮಂಡಿತವಾಗಿರುವ ಲೋಕಾಯುಕ್ತ ಆಯೋಗ ತಿದ್ದುಪಡಿ ಮಸೂದೆ 2013ರ ಪ್ರಕಾರ, ಲೋಕಾಯುಕ್ತರನ್ನು ನೇಮಿಸುವ ಪರಮಾಧಿಕಾರ ಮುಖ್ಯಮಂತ್ರಿ ನೇತೃತ್ವದ ಆಯ್ಕೆ ಸಮಿತಿಗೆ ಮಾತ್ರ ಇರುತ್ತದೆ. ಆ ಸಮಿತಿಯು ಶಿಫಾರಸ್ಸು ಮಾಡಿದ ಅಭ್ಯರ್ಥಿಯನ್ನು ರಾಜ್ಯಪಾಲರು ನೇಮಿಸಬೇಕಾಗುತ್ತದೆ. ಅಂದರೆ, ಲೋಕಾಯುಕ್ತರ ನೇಮಕದ ಪರಮಾಧಿಕಾರ ಮುಖ್ಯಮಂತ್ರಿ ಕೈಯಲ್ಲಿರುತ್ತದೆ. ಇದನ್ನು ಪರಮಾಧಿಕಾರ ಎನ್ನುವುದಕ್ಕಿಂತ ಸರ್ವಾಧಿಕಾರ ಎನ್ನುವುದೇ ಸೂಕ್ತ.

ಇಂಥ ಒಂದು ಮಸೂದೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ವಿಧಾನಸಭೆಯಲ್ಲಿ ಮಂಡಿಸುವ ಮೂಲಕ, ಕೇವಲ ಲೋಕಾಯುಕ್ತರ ಮೂಲ ಮಸೂದೆಯ ಸಿದ್ಧಾಂತಕ್ಕೆ ಮಾತ್ರವಲ್ಲದೆ, ಒಂದೆಡೆ ನ್ಯಾಯಾಂಗವನ್ನೇ ಅಪಮಾನಿಸಿದರೆ, ಇನ್ನೊಂದೆಡೆ ಈ ವಿಷಯದಲ್ಲಿ ರಾಜ್ಯಪಾಲರ ಸ್ಥಾನಗೌರವಕ್ಕೂ ಅಪಮಾನವೆಸಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.