ಕಲಬುರ್ಗಿಯಿಂದ ಬೆಂಗಳೂರಿಗೆ ಹೋಗಿ ಬರಲು ಇರುವ ರೈಲುಗಳಲ್ಲಿ ಸೋಲಾಪುರ- ಯಶವಂತಪುರ ರೈಲು ಹೆಚ್ಚು ವೇಗದ್ದು ಮತ್ತು ಜನರಿಗೆ ಅನುಕೂಲಕರವಾದದ್ದು. ಕೇವಲ 10 ಗಂಟೆಗಳಲ್ಲಿ ಕಲಬುರ್ಗಿಯಿಂದ ಯಶವಂತಪುರಕ್ಕೆ ಬರುವ ಈ ರೈಲಿನಲ್ಲಿ, ಕನಿಷ್ಠ 10ದಿನ ಮುಂಚಿತವಾಗಿ ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ. ಹೈದರಾಬಾದ್ ಕರ್ನಾಟಕದ ಜೀವನಾಡಿ ಎನಿಸಿರುವ ಈ ರೈಲನ್ನು ಹಾಸನದವರೆಗೆ ವಿಸ್ತರಿಸಲು ಮುಂದಾಗಿರುವ ಸಂಗತಿ ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಲಾದ ದಾಖಲೆಯಿಂದ ಬೆಳಕಿಗೆ ಬಂದಿದೆ.
ಹಾಸನದಿಂದ ಕಲಬುರ್ಗಿಗೆ ಬರುವವರು ಎಷ್ಟು ಜನರಿರುತ್ತಾರೆ? ಈ ರೈಲು ಹಾಸನದವರೆಗೆ ವಿಸ್ತರಣೆಯಾದರೆ ಆರಂಭದ ನಿಲ್ದಾಣ ಹಾಸನ ಆಗುವುದರಿಂದ ಸಹಜವಾಗಿ ಕೆಲವು ಬರ್ತ್ಗಳು ಹಾಸನದ ಪಾಲಾಗುತ್ತವೆ. ಆದ್ದರಿಂದ ಬೇರೆ ಭಾಗದವರು ವಿಧಿ ಇಲ್ಲದೆ, ಹೆಚ್ಚಿನ ಹಣ ತೆತ್ತು ಹಾಸನದಿಂದ ಕಲಬುರ್ಗಿಗೆ ಟಿಕೆಟ್ ಕಾಯ್ದಿರಿಸಿ, ‘ಬೋರ್ಡಿಂಗ್ ಅಟ್ ಯಶವಂತಪುರ’ ಎಂದು ನಮೂದಿಸುವ ಸ್ಥಿತಿ ಬರುತ್ತದೆ.
ಕಲಬುರ್ಗಿಯಿಂದಲೇ ಬೆಂಗಳೂರಿಗೆ ಒಂದು ರೈಲನ್ನು ಆರಂಭಿಸಬೇಕೆಂಬ ಬೇಡಿಕೆಯನ್ನು ತಳ್ಳಿಹಾಕಿದ ರೇಲ್ವೆ ಇಲಾಖೆ ಈಗಿರುವ ರೈಲನ್ನು ವಿಸ್ತರಿಸುವುದು ನ್ಯಾಯ ಸಮ್ಮತವಲ್ಲ. ನಮ್ಮ ಮನವಿ ಇಷ್ಟೇ, ಹಾಸನಕ್ಕೆ ಪ್ರತ್ಯೇಕ ನಂಬರ್ ನೀಡಿ ಓಡಿಸಿದರೆ, ಬರ್ತ್ ಕೋಟಾದಲ್ಲಿ ಕಡಿತವಾಗುವುದಿಲ್ಲ. ರೈಲ್ವೆ ಇಲಾಖೆ ಈ ಕುರಿತು ಮರು ಪರಿಶೀಲನೆ ಮಾಡಲಿ.
ವೆಂಕಟೇಶ ಮುದಗಲ್, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.