ಉತ್ತರ ಕರ್ನಾಟಕದ ಪ್ರಮುಖ ಸಾರಿಗೆ ಸಂಸ್ಥೆಯಾದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಖಾಸಗಿಯವರ ತೀವ್ರ ಪೈಪೋಟಿ, ಅಧಿಕಾರಿಗಳ ನಿರ್ಲಕ್ಷದೋರಣೆಯಿಂದ ನಷ್ಟದ ಹಾದಿ ಹಿಡಿದಿದೆ. ಹಾಗಾಗಿ ಇತ್ತೀಚಿನ ಹಲವಾರು ಮಾರ್ಗಸೂಚಿಗಳನ್ನು ರದ್ದುಗೊಳಿಸಿದೆ. ಹಾಗೂ ರದ್ದುಗೊಳಿಸುತ್ತಿದೆ.
ಇತ್ತೀಚೆಗೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ನೀಡುವುದೂ ಕಷ್ಟವಾಗಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಂಸ್ಥೆಗೆ ಅವಶ್ಯವಿರುವ ಬಿಡಿ ಭಾಗಗಳು, ಹೊಸ ಬಸ್ ಖರೀದಿ ಮಾಡಲು ಅಸಾಧ್ಯವಾಗಿರುವುದರಿಂದ ಪ್ರಯಾಣಿಕರ ಬೇಡಿಕೆ ಈಡೇರಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಕೈಚಿಲ್ಲಿ ಕುಳಿತಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಹುಬ್ಬಳ್ಳಿ, ಗದಗ, ಧಾರವಾಡ, ಶಿರಸಿ, ಮುಂತಾದ ಕಡೆಗಳಲ್ಲಿ ನಗರದ ಹೊರವಲಯದಲ್ಲಿ ಹೊಸ ಬಸ್ಸು ನಿಲ್ದಾಣಗಳನ್ನು ನಿರ್ಮಿಸಿದ್ದು, ಅವು ಸಾಮಾನ್ಯ ಪ್ರಯಾಣಿಕರಿಗೆ ಪ್ರಯೋಜನವಾಗಿರುವುದಿಲ್ಲ.
ಹೀಗಾಗಿ ಪ್ರಯಾಣಿಕರ ಅನವಶ್ಯ ವೆಚ್ಚ ಮಾಡಿ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಬದಲು ಹಳೆಯ ಬಸ್ನಿಲ್ದಾಣ ಪ್ರದೇಶದಿಂದ ಖಾಸಗಿ ವಾಹನ ಏರಲಾರಂಭಿಸಿದ್ದಾರೆ. ಶಿರಸಿಯಲ್ಲಂತೂ ರಾತ್ರಿ ವೇಳೆಯಲ್ಲಿ ಬರುವ ಬಸ್ಸುಗಳಿಗೆ ಹಳೆ ಬಸ್ ನಿಲ್ದಾಣದಲ್ಲಿ ಎಂಟ್ರಿ ಇಲ್ಲದಿರುವುದರಿಂದ ಹಾಗೂ ಅಲ್ಲಿ ಯಾವುದೇ ಸಂಸ್ಥೆಯ ಸಿಬ್ಬಂದಿಗಳೂ ಇಲ್ಲದಿರುವುದರಿಂದ ಖಾಸಗಿ ವಾಹನಗಳು ಬಸ್ ನಿಲ್ದಾಣದ ಒಳಗೆ ಹೋಗಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದರೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
ಇದಲ್ಲದೇ ಈ ಭಾಗದ ಅಧಿಕಾರಿಗಳು ಸಾರ್ವಜನಿಕರ ಮನವಿಗಳನ್ನು ತಿರಸ್ಕರಿಸಿ ತಮ್ಮ ಮನ ಬಂದ ಮಾರ್ಗದಲ್ಲಿ ಏಕಕಾಲದಲ್ಲಿ 2-3 ಖಾಲಿ ಬಸ್ ಓಡಿಸುತ್ತಿದ್ದಾರೆ. ಧಾರವಾಡ, ಗದಗ, ಶಿರಸಿ, ಹುಬ್ಬಳ್ಳಿ ಇತ್ಯಾದಿಗಳಲ್ಲಿ ಊರ ಹೊರವಲಯದಲ್ಲಿ ಇರುವ ಬಸ್ ನಿಲ್ದಾಣ ವ್ಯವಸ್ಥೆಯಂತು ಕುಲಗೆಟ್ಟು ಹೋಗಿವೆ. ಇದನ್ನೆಲ್ಲ ಸರಿಪಡಿಸುವ ಅವಶ್ಯಕತೆ ಇದ್ದು ಸಾರಿಗೆ ಸಚಿವರು ಇತ್ತ ಗಮನ ನೀಡಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.