`ಅನಂತ್ ರಾಜೀನಾಮೆಗೆ ಒತ್ತಾಯ~ ಈ ಶೀರ್ಷಿಕೆಯ ಅಡಿಯಲ್ಲಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತುಗಳನ್ನು (ಪ್ರ. ವಾ. ಅ. 7) ಓದಿದಾಗ ನಗೆ ಬಂತು. ಇತರರಿಗೆ ಸನ್ಯಾಸ ದೀಕ್ಷೆ ಕೊಡಿಸಲೆಳಸುವವರ ತೆರನಾಗಿದೆ ಯಡಿಯೂರಪ್ಪನವರ ನಿಲುವು.
ಸಿ.ಆರ್.ಎ. ನ ಮತ್ತು ಸುಪ್ರೀಂಕೋರ್ಟಿನ ನಿರ್ದೇಶನಗಳಿಂದ ರಾಜ್ಯದ ಜನರಿಗೆ ಕಷ್ಟ ಒದಗಿದೆ. ಈ ಪರಿಸ್ಥಿತಿಗೆ ರಾಜ್ಯ ಸರ್ಕಾರದ ಅಸಮರ್ಥತೆಯೇ ಕಾರಣ.
ಬೇರೆಯವರ ರಾಜೀನಾಮೆಗೆ ಆಗ್ರಹಿಸುವ ಯಡಿಯೂರಪ್ಪನವರು ಮೊದಲು ತಮ್ಮ ಸಂಸದ ಮಗನಿಂದ ರಾಜೀನಾಮೆ ಕೊಡಿಸಲು ಮುಂದಾಗಲಿಲ್ಲ ಏಕೆ?
ತಾವೇ ರಾಜೀನಾಮೆ ಒಗೆದು ಚಳವಳಿಯಲ್ಲಿ ಭಾಗವಹಿಸಲು ಏನಡ್ಡಿ ಇತ್ತು? ಇವರು ಮತ್ತು ಇವರ ಹಿಂಬಾಲಕ ಶಾಸಕರು ಮತ್ತು ಮಂತ್ರಿಗಳು ರಾಜೀನಾಮೆ ಬಿಸಾಕಿ ಮೇಲ್ಪಂಕ್ತಿಯೊದಗಿಸಬೇಕಿತ್ತು.
ಹಾಗಾದರೆ, ಇವರು ನಡೆಸುವ ಧರಣಿ ಎಂಥದು? ನಾಲ್ಕು ದಶಕಗಳಿಗೂ ಮಿಕ್ಕಿ ರಾಜಕೀಯದಲ್ಲಿ ಮುಳುಗಿರುವ ಇವರು ತಮ್ಮ ಧರಣಿಯ ಉದ್ದೇಶದ ಬಗ್ಗೆ ಹೇಳುವುದಿಲ್ಲ ಬಿಡಿ! ಕಾವೇರಿ ಸಮಸ್ಯೆ ಸಮಸ್ಯೆಯಾಗೇ ಉಳಿದಿರುವುದಕ್ಕೆ ಕರ್ನಾಟಕದ ಶಾಸಕರು ಮತ್ತು ಸಂಸದರ ನಿಷ್ಕ್ರಿಯತೆ ಮತ್ತು ಅಧಿಕಾರ ಹಾಗೂ ಅದು ಒದಗಿಸುವ ಸವಲತ್ತುಗಳೇ ಕಾರಣವೆಂದರೆ ಅದು ಹೇಗೆ ತಪ್ಪಾದೀತು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.