ADVERTISEMENT

ಸಾರಿಗೆ ಸಂಸ್ಥೆ: ಸೇವೆಗೋ, ಲಾಭಕ್ಕೋ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬೇರೆ ಬೇರೆ ರಾಜ್ಯಗಳ ಸಾರಿಗೆ ಸಂಸ್ಥೆಗಳು ಪ್ರಯಾಣಿಕರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರೆ, ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳು ಲಾಭ ಗಳಿಸಲು ತಮ್ಮನ್ನು ಸಮರ್ಪಿಸಿಕೊಂಡಿದೆ. ಪ್ರಯಾಣಿಕರಿಗೆ ಕಡಿಮೆ ದರದ ಉತ್ತಮ ಪ್ರಯಾಣ ವ್ಯವಸ್ಥೆಯನ್ನು ಒದಗಿಸುವ ಬದಲು ದುಬಾರಿ ದರ ವಿಧಿಸಿ, ಅಗತ್ಯವಿಲ್ಲದಿದ್ದರೂ ಐಷಾರಾಮಿ ಬಸ್ಸುಗಳನ್ನು ಖರೀದಿಸಿ, ಸಾರ್ವಜನಿಕರನ್ನು ದೋಚುವುದೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿಗಳ ಕಾಯಕವಾದಂತಿದೆ.

 ಒಂಚೂರೂ ಮುನ್ಸೂಚನೆ ನೀಡದೆ, ಮಧ್ಯರಾತ್ರಿಯಲ್ಲಿ ದರ ಏರಿಸುವ ಇವರಿಗೂ ಮಧ್ಯರಾತ್ರಿ ಹೊಟ್ಟೆಪಾಡಿಗಾಗಿ ಕಳ್ಳತನ ಮಾಡುವವರಿಗೂ ಏನು ವ್ಯತ್ಯಾಸ?
ಅದರಲ್ಲೂ ಅರ್ಧ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರಿ, ಇನ್ನರ್ಧ ಭಾಗದಲ್ಲಿ ಕಾವೇರಿ ಚಳವಳಿ ಉರಿಯುತ್ತಿರುವ ಸಂದರ್ಭದಲ್ಲಿಯೇ ದರ ಏರಿಕೆಯ ಸಾಹಸಕ್ಕೆ ಕೈಹಾಕಿ ಜನಸಾಮಾನ್ಯರ ಸಂಕಷ್ಟಗಳಿಗೂ ತನಗೂ ಏನೂ ಸಂಬಂಧವಿಲ್ಲದಂತೆ ವರ್ತಿಸಿರುವ ರಾಜ್ಯ ಸರ್ಕಾರವು ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡಂತಿದೆ.

ರಾಜ್ಯ ಸರಕಾರಕ್ಕೆ ನಿಜವಾಗಿ ಜನಪರ ಕಾಳಜಿ ಇದ್ದಿದ್ದರೆ, ತೈಲ ಬೆಲೆ ಏರಿಕೆಯಿಂದ ಸಿಗುವ ಹೆಚ್ಚುವರಿ ತೆರಿಗೆಯ ಒಂದು ಪಾಲನ್ನು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ನೀಡಬಹುದಿತ್ತು. ಅಥವಾ, ಕೆಎಸ್‌ಆರ್‌ಟಿಸಿ, ಬಿಎಂಟಿಸಿಗಳಿಗೆ ಪೂರೈಕೆಯಾಗುವ ಡೀಸೆಲನ್ನು ರಾಜ್ಯ ಮಾರಾಟ ತೆರಿಗೆ, ಸೆಸ್‌ಗಳಿಂದ ಹೊರತುಪಡಿಸಬಹುದಿತ್ತು. ಈ ಮೂಲಕ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆಯನ್ನು ತಪ್ಪಿಸಬಹುದಿತ್ತು.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.