ಇತ್ತೀಚೆಗೆ ನಮ್ಮ ಸರ್ಕಾರ ಸೌರಫಲಕಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನಕ್ಕೆ ಒತ್ತು ನೀಡಿದೆ. ರಾಜ್ಯದಲ್ಲಿ ಬೋಳುಗುಡ್ಡ, ಬೆಟ್ಟಗಳು ಬಹಳಷ್ಟಿವೆ. ಇವುಗಳಲ್ಲಿ ಹಸಿರು ಮರಗಳು ಅತ್ಯಲ್ಪ. ವರ್ಷಪೂರ್ತಿ ಬಿಸಿಲಿಗೆ ಮೈಯೊಡ್ಡುವ ಈ ಗುಡ್ಡ–ಬೆಟ್ಟಗಳು ಸೌರಶಕ್ತಿ ಉತ್ಪಾದನೆಗೆ ಸೂಕ್ತವಾದವು. ಗರಿಷ್ಠ ಪ್ರಯೋಜನ ಪಡೆಯಲು ಮುತುವರ್ಜಿ ವಹಿಸಬೇಕು.
ಮೊದಲನೆಯದಾಗಿ ಈ ಬೆಟ್ಟ–ಗುಡ್ಡಗಳಲ್ಲಿ ಬಹುಪಾಲು ಸರ್ಕಾರಿ ಸ್ವತ್ತು. ಇದಕ್ಕಾಗಿ ಯಾರಿಗೂ ಹಣ ಕೊಡಬೇಕಾಗಿಲ್ಲ. ಇಳಿಜಾರು ಇರುವುದರಿಂದ ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಕಡಿಮೆ ಖರ್ಚು, ಹೆಚ್ಚು ಉತ್ಪಾದನೆ. ಯಾರ ಅನುಮತಿಗೂ ಕಾಯಬೇಕಾಗಿಲ್ಲ. ಯಾರ ತಂಟೆ–ತಕರಾರೂ ಇರುವುದಿಲ್ಲ.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದರೆ ದೇಶದಲ್ಲೇ ಕರ್ನಾಟಕ ಮಾದರಿ ರಾಜ್ಯ ಆಗುವುದು. ಸೌರವಿದ್ಯುತ್ ಲಭ್ಯತೆ ಹೆಚ್ಚಿದಷ್ಟೂ ಜನರ ನೆಮ್ಮದಿಯೂ ಹೆಚ್ಚುತ್ತದೆ. ಸರ್ಕಾರಕ್ಕೆ ವಿದ್ಯುತ್ ಕೊರತೆಯ ದೊಡ್ಡ ತಲೆನೋವು ನಿವಾರಣೆಯಾಗುತ್ತದೆ.
ಈ ಯೋಜನೆಗೆ ಸರ್ಕಾರವೇ ಬಂಡವಾಳ ಹೂಡಬೇಕು. ನಮ್ಮ ಸರ್ಕಾರಕ್ಕೆ ಈ ಕೆಲಸ ಮಾಡುವಷ್ಟು ಕೌಶಲ ಮತ್ತು ಸಾಮರ್ಥ್ಯವಿದೆ. ಈ ಕಾರ್ಯಕ್ಕೆ ವೇಗ ತುಂಬಿದರೆ ಒಳ್ಳೆಯದು. ಉದಾಹರಣೆಗೆ ಬೆಂಗಳೂರು ನಗರದ ಸರಹದ್ದಿನಲ್ಲಿರುವ ಘಾಟಿ ಸುಬ್ರಹ್ಮಣ್ಯ ಕ್ರಾಸ್ನಿಂದ ತೊಂಡೇಬಾವಿವರೆಗೂ (ಗೌರಿಬಿದನೂರು ರಸ್ತೆ) ಇರುವ ಬೆಟ್ಟವನ್ನು ಪರಿಶೀಲಿಸಬಹುದು. ಇಂತಹ ಬೆಟ್ಟಗಳು ರಾಜ್ಯದಾದ್ಯಂತ ದೊರೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.