`ಹಳ್ಳಿಗಳ ಉದ್ಧಾರವೇ ಭಾರತದ ಉದ್ಧಾರ' ಎಂಬ ಅಭಿಪ್ರಾಯವನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೊಂದಿದ್ದರು. ಸ್ಥಳೀಯ ಆಡಳಿತವನ್ನು ಸ್ಥಳೀಯರೇ ನಿರ್ವಹಿಸಿದರೆ ಗ್ರಾಮದ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಬಹುದು ಎಂಬುದನ್ನು ಮನಗಂಡ ಸರ್ಕಾರ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತಂದು ಗ್ರಾಮಾಡಳಿತಕ್ಕೆ ಬುನಾದಿ ಹಾಕಿತು.
ಗ್ರಾಮಗಳಲ್ಲಿ ಪಕ್ಷಾತೀತ ಚುನಾವಣೆ ನಡೆಸಿ ಅಧಿಕಾರವನ್ನು ಸ್ಥಳೀಯರ ಕೈಯಲ್ಲಿಟ್ಟದ್ದು ಶ್ಲಾಘನೀಯವೇ ಸರಿ. ಆದರೆ ಅದರ ಮೂಲ ಉದ್ದೇಶವನ್ನು ಅರ್ಥಮಾಡಿಕೊಳ್ಳದ ಜನಪ್ರತಿನಿಧಿಗಳು ಮೌಢ್ಯದಿಂದ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮರೆತು ಗ್ರಾಮಾಡಳಿತದ ಅಧಿಕಾರಿಗಳ ಕೈಗೊಂಬೆಯಾದುದು, ಕೇವಲ, ವಾರ್ಡ್, ಗ್ರಾಮ, ಪಂಚಾಯತ್ ಸಭೆಗಳಿಗೆ ಮಾತ್ರ ಮೀಸಲಾದುದು ದುರಂತವೇ.
ಇದಕ್ಕೆ ಕಾರಣ ಸ್ಥಳೀಯ ಜನಪ್ರತಿನಿಧಿಗಳಿಗೆ ಯಾವುದೇ ರೀತಿಯ ವೇತನ ಇಲ್ಲದಿರುವುದು. ಇದ್ದರೂ ಸಭೆಗೆ ಉದಾ:ರೂ 250, 300, 500ರಂತೆ ಸಂಭಾವನೆ ಪಡೆದು, ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಸಮಾಜಕ್ಕೆ ಅರ್ಪಿಸಿರುವುದರಿಂದ ಅವರ ಅವಲಂಬನೆಯಲ್ಲಿರುವ ಕುಟುಂಬಗಳು ಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಿವೆ. ಹಾಗಾಗಿ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗಿದೆ.
ಆದುದರಿಂದ ಸರ್ಕಾರ ಕುಟುಂಬ ನಿರ್ವಹಣೆಗೆ ತಕ್ಕಂತೆ ಕನಿಷ್ಠ ಮಾಸಿಕ ವೇತನ ನಿಗದಿಪಡಿಸಿದರೆ ಅವರು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಅನುವಾಗುತ್ತದೆ. ಗುಂಪುಗಾರಿಕೆ, ಜಾತೀಯತೆ, ಮೋಸ, ಭ್ರಷ್ಟಾಚಾರ ಕಡಿಮೆಯಾಗಿ, ವಿದ್ಯಾವಂತ ಯುವಕರು, ರಾಜಕೀಯದಲ್ಲಿ ಭಾಗವಹಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಲಿ?
- ಎಂ. ಮಂಚಶೆಟ್ಟಿ, ಮಾದರಹಳ್ಳಿ, ಮದ್ದೂರು ತಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.