ರಾಜ್ಯದ ಶಾಸಕರು, ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ವೀಕ್ಷಿಸಿದವರಿಗೆ, ಆ ಕಾರ್ಯಕ್ರಮವೊಂದು ಆಷಾಢಭೂತಿತನದಂತೆ ಕಂಡಿದ್ದರೆ ಅಚ್ಚರಿಇಲ್ಲ.
ಸರ್ಕಾರ ರಚನೆಯಲ್ಲಿ ಶಾಸಕರು, ಸಚಿವರು ನಡೆದುಕೊಂಡ ರೀತಿ, ಪ್ರಜ್ಞಾವಂತ ಮತದಾರರಲ್ಲಿ ಆಶ್ಚರ್ಯ, ಭಯ ಹುಟ್ಟಿಸುವುದರ ಜೊತೆಗೆ ಸಂವಿಧಾನ, ಕಾನೂನಿನ ಉಲ್ಲಂಘನೆ, ನೀತಿ–ಅನೀತಿ, ಪಕ್ಷಪಾತ ಎಲ್ಲವೂ ಎದ್ದು ಕಾಣುವಂತೆ ಮಾಡಿದೆ. ಇದನ್ನು ಗಮನಿಸಿದರೆ ಬಸವಣ್ಣನವರ ‘ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ– ಧರೆ ಹೊತ್ತಿ ಉರಿದರೆ ನಿಲಬಹುದೇ?...’ ಎಂಬ ವಚನ ನೆನಪಾಗುತ್ತದೆ.
‘ರಾಗ–ದ್ವೇಷ, ಭಯಮುಕ್ತವಾಗಿ, ಪಕ್ಷಪಾತವಿಲ್ಲದೆ ಸರ್ವರಿಗೂ ಸಮಾನವಾಗಿ ನ್ಯಾಯ ಮಾಡುತ್ತೇನೆ...’ ಎಂದು ಪ್ರಮಾಣ ಮಾಡಿದ ಶಾಸಕರೇ ಖಾಸಗಿ ಹೋಟೆಲ್ನಲ್ಲಿ ಭಯಭೀತರಾಗಿ ಅಡಗಿ ಕುಳಿತುಕೊಂಡಿದ್ದು ಪ್ರಜಾಪ್ರಭುತ್ವದ ಅಣಕವೇ ಸರಿ. ಅವರ ಪ್ರತಿಜ್ಞೆಯನ್ನು ನಂಬಿದ ಪ್ರಜೆಗಳು ಅಡಗಿಕೊಳ್ಳಲು ಎಲ್ಲಿ ಜಾಗ ಹುಡುಕಬೇಕೋ!
ಇನ್ನು ಮುಂದಾದರೂ ಶಾಸಕರು, ಸಚಿವರು ತಮಗೆ ಭಯವಿಲ್ಲ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಶಕ್ತರು ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.