ADVERTISEMENT

ಹಿಂಬಾಗಿಲ ಪ್ರಯತ್ನಕ್ಕೆ ಕಡಿವಾಣ ಬೇಕು

ವಿಜಯ್‌, ಮೂಡುಬಿದಿರೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಆಧಾರ್‌ ಸಂಖ್ಯೆ ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಮಧ್ಯಂತರ ಆದೇಶ ನಮಗೆಲ್ಲ ಸಮಾಧಾನ ತಂದಿದೆ. ಆಧಾರ್‌ ಯೋಜನೆ ಚಾಲನೆ ಪಡೆದುಕೊಂಡ ದಿನದಿಂದಲೂ, ಅದರ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಎಲ್ಲಿಯೂ ಹೇಳಿಲ್ಲ.

ಒಂದೆಡೆ, ಆಧಾರ್‌ ಸಂಪೂರ್ಣ ಐಚ್ಛಿಕ ಎಂದು ಸುಪ್ರೀಂ ಕೋರ್ಟ್‌ಗೇ ಹೇಳುವ ಸರ್ಕಾರ, ತನ್ನ ಹಲವು ಸಬ್ಸಿಡಿಗಳನ್ನು ಪಡೆದುಕೊಳ್ಳಲು ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಿದೆ. ಇದು ಆಧಾರ್‌ ಪಡೆದು ಕೊಳ್ಳುವುದನ್ನು ಕಡ್ಡಾಯಗೊಳಿಸುವ ‘ಹಿಂಬಾಗಿಲ’ ಪ್ರಯತ್ನ ಎನ್ನದೆ ವಿಧಿಯಿಲ್ಲ. ಕೇಂದ್ರವನ್ನು ಅನುಸರಿಸಿ, ರಾಜ್ಯ ಸರ್ಕಾರಗಳು ಕೂಡ, ಆಧಾರ್‌ ಸಂಖ್ಯೆ ನೀಡುವುದನ್ನು ಹಲವು ಯೋಜನೆಗಳಿಗೆ ಕಡ್ಡಾಯಗೊಳಿಸುತ್ತಿವೆ.

ಆಧಾರ್‌ ಸಂಖ್ಯೆ ಹೊಂದುವುದು ಐಚ್ಛಿಕವೋ ಅಥವಾ ಕಡ್ಡಾಯವೋ ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು. ಇಷ್ಟು ದಿನದವರೆಗೆ ಸುಳ್ಳು ಹೇಳಿದ್ದು ಸಾಕು. ಆಧಾರ್‌ ಸಂಖ್ಯೆ ಹೊಂದದ ಪ್ರಜೆಗೆ ಭಾರತದಲ್ಲಿ ಬದುಕುವ ಹಕ್ಕೇ ಇಲ್ಲ ಎಂಬಂತಹ ಭಯದ ವಾತಾವರಣ ನಿರ್ಮಾಣ ಮಾಡಲು ಸರ್ಕಾರಗಳು ಮುಂದಾಗಿರುವಂತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.