ADVERTISEMENT

‘ಮೆಟ್ರೊ’ ಫಲಶ್ರುತಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
‘ಮೆಟ್ರೊ’ ಫಲಶ್ರುತಿ
‘ಮೆಟ್ರೊ’ ಫಲಶ್ರುತಿ   

‘ಮೆಟ್ರೊ’ ಫಲಶ್ರುತಿ
ವಿಲ್ಸನ್‌ ಗಾರ್ಡನ್‌ 3ನೇ ಕ್ರಾಸ್‌ನಲ್ಲಿ ಮ್ಯಾನ್‌ಹೋಲ್‌ ತುಂಬಿ ಒಂದು ವರ್ಷದಿಂದ ಹರಿಯುತ್ತಿತ್ತು. ‘ಪ್ರಜಾವಾಣಿ’ ಮೆಟ್ರೊ ಪುರವಣಿಯ ಕುಂದುಕೊರತೆ ಕಾಲಂನಲ್ಲಿ ಈ ಬಗ್ಗೆ ಬರಹ ಪ್ರಕಟಗೊಂಡಿತ್ತು. ಮಾರನೇ ದಿನವೇ ಬಿಡಬ್ಲ್ಯುಎಸ್ಎಸ್‌ಬಿ ಕೆಲಸಗಾರರು ಆ ರಸ್ತೆಯುದ್ದಕ್ಕೂ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಮಾಡಿದ್ದಾರೆ.
–ಗಣೇಶ್‌ ಬಾಬು, ಸಂಪಂಗಿರಾಮನಗರಮ್ಯಾನ್‌ಹೋಲ್‌ ಸರಿಪಡಿಸಿ

*
ಚಿನ್ನಸ್ವಾಮಿ ಕ್ರೀಡಾಂಗಣ ಮುಖ್ಯದ್ವಾರದ ರಸ್ತೆಯಲ್ಲಿ ತಿಂಗಳಿಗೆ ಒಮ್ಮೆಯಾದರೂ ಮ್ಯಾನ್‌ಹೋಲ್‌ ತುಂಬಿ, ಕೊಳಚೆ ನೀರು ಹರಿಯುತ್ತದೆ. ಮಹಾತ್ಮ ಗಾಂಧಿ ಸರ್ಕಲ್‌ವರೆಗೂ ಈ ಕೊಳಚೆ ನೀರು ಹರಿಯುವುದರಿಂದ ಪಾದಚಾರಿಗಳು ರಸ್ತೆ ದಾಟದ ಸ್ಥಿತಿ ನಿರ್ಮಾಣವಾಗುತ್ತದೆ. ಚಾಲಕರು ಜೋರಾಗಿ ವಾಹನ ಓಡಿಸುವುದರಿಂದ ನೀರು ಜನರ ಮೇಲೆ ಸಿಡಿಯುತ್ತದೆ. ಬಿಡಬ್ಲ್ಯುಎಸ್ಎಸ್‌ಬಿ ಶೀಘ್ರ ಇತ್ತ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕು.
–ಈಶ್ವರ ಪ್ರಸಾದ್‌, ಶಿವಾಜಿನಗರ

*

ADVERTISEMENT

ಮೆಟ್ರೊ ರೈಲು ವಿಸ್ತರಿಸಿ
ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ಸುಂಕದಕಟ್ಟೆ ತನಕ ಸದಾ ಸಂಚಾರ ದಟ್ಟಣೆ. ಮೆಟ್ರೊ ರೈಲು ಮಾರ್ಗವನ್ನು ಟೋಲ್‌ಗೇಟ್‌ ಮಾರ್ಗವಾಗಿ ಬ್ಯಾಡರಹಳ್ಳಿವರೆಗೂ ವಿಸ್ತರಿಸಿದರೆ  ಎಲ್ಲರಿಗೂ  ಅನುಕೂಲ. ಎಂಟನೇ ಮೈಲಿಯಲ್ಲಿ ಸಂಚರಿಸುತ್ತಿರುವ ಮೆಟ್ರೊಗೆ ಸಂಪರ್ಕ ಕಲ್ಪಿಸಿದರೆ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ. ಜನಪ್ರತಿನಿಧಿಗಳು ಶೀಘ್ರ ಇತ್ತ ಗಮನ ಹರಿಸಬೇಕು.
–ಗಣಪತಿ. ಎನ್.  ಭಟ್ , ವಿದ್ಯಾಮಾನ್ಯನಗರ.

*
ಮಠದ ಎದುರಿಗೆ ಕಸ ವಿಲೇವಾರಿ   
ಬಿಬಿಎಂಪಿ 161ನೇ ವಾರ್ಡ್‌ಗೆ ಸೇರುವ ಹೊಸಕೆರೆಹಳ್ಳಿಯಲ್ಲಿ ಜನವಸತಿ ಪ್ರದೇಶದ ಮಧ್ಯದಲ್ಲಿಯೇ ರಾಘವೇಂದ್ರಸ್ವಾಮಿ ಮಠವಿದೆ. ಅದರ ಬೆನ್ನಿಗೆ ಸರ್ಕಾರಿ ಶಾಲೆಯಿದೆ. ಮಠದ ಆಸುಪಾಸಿನಲ್ಲಿ ತರಕಾರಿ- ಹಣ್ಣು ಮಾರಾಟ ಮಳಿಗೆಗಳಿವೆ. ಸಂಜೆಯಾದರೆ ರಸ್ತೆ ಬದಿಯ ತಿನಿಸು ಮಾರುವವರ ಗಾಡಿಗಳಲ್ಲಿ ಜೀವ ಸಂಚಾರ.

ಮಠದ ವೃಂದಾವನದ ಎದುರು ಇರುವ ಬಾಗಿಲಿನ 25 ಅಡಿಯ ಆಚೆಗೆ ನಿತ್ಯವೂ ಯಂತ್ರಗಳ ಮೂಲಕ ಬಡಾವಣೆಯ ಕಸ ವಿಲೇವಾರಿ ನಡೆಯುತ್ತಿದೆ. ಇದರ ದುರ್ನಾತದಿಂದಾಗಿ ಮಠಕ್ಕೆ ಬರುವ ಭಕ್ತರ ಸಂಖ್ಯೆಯೇ ಕಡಿಮೆಯಾಗಿದೆ.

ಹಲವು ಸೇವೆಗಳನ್ನು ನಡೆಸುವ ಭಕ್ತರು ಮಠದಲ್ಲಿಯೇ ಊಟ ಮಾಡುವುದು  ವಾಡಿಕೆ. ಕಳೆದ ಹಲವು ತಿಂಗಳಿಂದ ಮಠದ ಎದುರೇ ಕಸ ವಿಲೇವಾರಿ ಮಾಡುತ್ತಿರುವುದರಿಂದ ರಾಘವೇಂದ್ರಸ್ವಾಮಿಗಳ ವೃಂದಾವನದ ಪೂಜೆಗೆ, ಊಟದ ವ್ಯವಸ್ಥೆಗೆ ತೊಂದರೆಯಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೂ ಈ ಸಮಸ್ಯೆಯನ್ನು ತಂದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ಸೊಳ್ಳೆ ಕಾಟವೂ ವಿಪರೀತವಾಗಿದೆ. ಊಟಕ್ಕೂ ಕುಳಿತಾಗ ತುತ್ತು ಬಾಯಿಗಿಡುವುದು ಹಿಂಸೆ ಎನಿಸುತ್ತದೆ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವೂ ಹತ್ತಿರದಲ್ಲಿದೆ. ಇನ್ನಾದರೂ ಕಸ ವಿಲೇವಾರಿ ಸ್ಥಳ ಬದಲಿಸಬೇಕು ಎನ್ನುವುದು ನಮ್ಮ ಕೋರಿಕೆ.
– ಸ್ವಾತಿ, ಹೊಸಕೆರೆಹಳ್ಳಿ

*
ರಸ್ತೆ ಮೇಲೆ ಮೋರಿ ನೀರು
ಹೊಸಕೋಟೆ 2ನೇ ಕ್ರಾಸ್‌ ಗಂಗಮ್ಮನ ದೇವಸ್ಥಾನ ರಸ್ತೆಯಲ್ಲಿ ಮೋರಿ ಕಟ್ಟಿಕೊಂಡು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಹದಗೆಟ್ಟಿದ್ದು, ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ.
–ಗೀತಾ, ಹೊಸಕೋಟೆ

*
ಕಸ ವಿಲೇವಾರಿ ಮಾಡಿ
ಜ್ಞಾನಜ್ಯೋತಿನಗರದ 8ನೇ ಮುಖ್ಯರಸ್ತೆ, 6ನೇ ಕ್ರಾಸ್‌, ಎಸ್‌.ಕೆ. ಲೇಔಟ್‌ನಲ್ಲಿ ನಮ್ಮ ಮನೆ ಇದೆ. ಮನೆ ಮುಂದಿನ ಖಾಲಿ ನಿವೇಶನದಲ್ಲಿ ಗಿಡಗಳು ಬೆಳೆದು, ಕಸದ ರಾಶಿ ಬಿದ್ದಿದೆ. ನಿವೇಶನ ಮಾಲೀಕರಿಗೆ ಈ ಬಗ್ಗೆ ಬಹಳಷ್ಟು ಸಾರಿ ಹೇಳಿದ್ದರೂ ಕಸ ವಿಲೇವಾರಿ ಮಾಡಿಲ್ಲ. ಕಸದ ರಾಶಿ ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಿ.

*
ಬಸ್‌ ಸೌಲಭ್ಯ ಕಲ್ಪಿಸಿ
ರೂಟ್‌ ಸಂಖ್ಯೆ 340ಎ, 340ಕೆ ಬಸ್‌ಗಳು  ಎಚ್‌ಎಸ್‌ಆರ್‌ ಲೇಔಟ್‌ 27ನೇ ಮುಖ್ಯರಸ್ತೆ ಬಸ್‌ ನಿಲ್ದಾಣಕ್ಕೆ ಬೆಳಿಗ್ಗೆ 7ರಿಂದ 8ರ ಅವಧಿಯಲ್ಲಿ ಸರಿಯಾಗಿ ಬರುತ್ತಿಲ್ಲ. ಬಹಳಷ್ಟು ಪ್ರಯಾಣಿಕರು ಈ ಸಂಖ್ಯೆಯ ಬಸ್‌ಗಳನ್ನೇ ಅವಲಂಬಿಸಿರುವುದರಿಂದ ಬಿಎಂಟಿಸಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
-ವೆಂಕಟೇಶ್‌ ಕೋಟೇಶ್ವರ್‌

*
ಎಲ್ಲೆಂದರಲ್ಲಿ ಕಸ ಎಸೆಯಬೇಡಿ
ಚೌಡೇಶ್ವರಿ ನಗರದಿಂದ ರಿಂಗ್ ರೋಡ್‌ಗೆ ಹೋಗುವ (ಸುಮನಹಳ್ಳಿ ಸಮೀಪ) ಪಕ್ಕದ ಸರ್ವಿಸ್ ರಸ್ತೆಯಲ್ಲಿ  ಎಲ್ಲೆಂದರಲ್ಲಿ ಕಸವನ್ನು ಎಸೆಯುತ್ತಾರೆ. ದಯವಿಟ್ಟು ಈ ರೀತಿ ಕಸವನ್ನು ಎಸೆಯದೇ ಕಸದ ಬುಟ್ಟಿಗೆ ಅಥವಾ ಪಾಲಿಕೆ ವಾಹನಗಳಿಗೆ ಹಾಕಿ.
–ಧನಂಜಯ್‌, ಸುಮನಹಳ್ಳಿ

*
ಬಸ್‌ಗಾಗಿ 2ಕಿ.ಮೀ ನಡೆಯಬೇಕು
ಬಿಬಿಎಂಪಿ ವ್ಯಾಪ್ತಿಯ ಯಲಹಂಕ, ವಾರ್ಡ್‌ ನಂ5ರಲ್ಲಿ ಬರುವ ಅಗ್ರಹಾರ ನಮ್ಮೂರು. ಇಲ್ಲಿಗೆ ಬಸ್‌ ಸೌಲಭ್ಯವಿಲ್ಲ. ಬಸ್ಸಿಗಾಗಿ ಎರಡು ಕಿ.ಮೀ ನಡೆಯಬೇಕು. ರಸ್ತೆಯೂ ಸರಿ ಇಲ್ಲ. ದಯವಿಟ್ಟು ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
–ಪವನ್‌, ಅಗ್ರಹಾರ

*
ರಸ್ತೆ ಸರಿಪಡಿಸಿ
ಕೌದೇನಹಳ್ಳಿ ಮುಖ್ಯರಸ್ತೆ ಮಳೆಯಿಂದ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ದಯವಿಟ್ಟು ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಸಮಸ್ಯೆಗೆ ಇತಿಶ್ರೀ ಹಾಡಿ.
–ಗೌತಮ್‌, ಕಲ್ಕೆರೆ ಮುಖ್ಯರಸ್ತೆ, ರಾಮಮೂರ್ತಿ ನಗರ

*
ಡಾಂಬರು ಹಾಕಿಸಿ...
ಹೆಸರು ಸುಂದರನಗರ, ಇಲ್ಲಿನ ರಸ್ತೆಗಳೇ ಸುಂದರವಾಗಿಲ್ಲ. ಮಳೆ ಬಂದು ಡಾಂಬಾರು ಕಿತ್ತು ಹೋಗಿದೆ. ಗುಂಡಿಬಿದ್ದು, ವಾಹನ ಚಲಾಯಿಸಲೂ ಕಷ್ಟವಾಗುತ್ತಿದೆ. ಶೀಘ್ರವೇ 2ನೇ ಮುಖ್ಯರಸ್ತೆ, 1ನೇ ಕ್ರಾಸ್‌ ರಸ್ತೆ ಕಾಮಗಾರಿ ಮಾಡಿ, ತೊಂದರೆ ತಪ್ಪಿಸಿ.
–ವಾಸುಕಿ ಅಯ್ಯಂಗಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.