ADVERTISEMENT

ಸಂವಿಧಾನವಿರೋಧಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಹಲವಾರು ರಂಗಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳೆನಿಸಿಕೊಂಡವರು ಇತ್ತೀಚೆಗೆ ದೇಶದ ಸಂವಿಧಾನದ ವಿರುದ್ಧ ಕಟುವಾದ ಮಾತುಗಳನ್ನಾಡುತ್ತಿರುವುದು ಖಂಡನೀಯ. ಹೀಗೆ ಮಾತನಾಡಿದವರ ವಿರುದ್ಧ ಧ್ವನಿ ಎತ್ತಿ ಹಲವು ವ್ಯಕ್ತಿಗಳಿಂದ ಕ್ಷಮೆ ಕೇಳುವಂತೆ ಮಾಡಿದ್ದೂ ಆಗಿದೆ. ಆದರೆ ಸಂವಿಧಾನವಿರೋಧಿ ಹೇಳಿಕೆಗಳನ್ನು ಕೊಡುವ ವ್ಯಕ್ತಿಗಳನ್ನು ಜಾತಿ, ಧರ್ಮ, ರಾಜಕೀಯ ಪಕ್ಷ, ಮೇಲು, ಕೀಳು ಅಥವಾ ಇತರೆ ಯಾವುದೇ ಭೇದಗಳಿಲ್ಲದೆ ಸಮನಾಗಿ ಪರಿಗಣಿಸಿ ಖಂಡಿಸಬೇಕಲ್ಲವೇ?

ಸಂವಿಧಾನದ ವಿಧಿ–ವಿಧಾನಗಳ ಅನುಸಾರ ಆಯ್ಕೆಯಾಗುವ ಯಾವುದೇ ವ್ಯಕ್ತಿ ಪ್ರಧಾನಿಯಾದರೆ ಅವರನ್ನು ಒಪ್ಪಿಕೊಳ್ಳುವುದು ಎಲ್ಲ ಪ್ರಜೆಗಳ ಕರ್ತವ್ಯ. ಅದನ್ನು ಬಿಟ್ಟು, ಆ ಸ್ಥಾನಕ್ಕೆ ಬಂದವರನ್ನು ಒಪ್ಪುವುದಿಲ್ಲ ಎಂಬ ಮಾತುಗಳು ಸಂವಿಧಾನ ವಿರೋಧಿಯಾಗುವುದಿಲ್ಲವೇ? ಯಾರನ್ನೇ ಆಗಲಿ, ವ್ಯಕ್ತಿ ನೆಲೆಯಲ್ಲಿ ವಿರೋಧಿಸಿದರೂ ಸಂವಿಧಾನಬದ್ಧವಾಗಿ ಆಯ್ಕೆಯಾದಾಗ ಅವರನ್ನು ಒಪ್ಪಿಕೊಳ್ಳದಿದ್ದಲ್ಲಿ ಅವರು ಅಲಂಕರಿಸಿದ ಸ್ಥಾನವನ್ನೂ ಒಪ್ಪಲಿಲ್ಲ ಎಂದೇ ಅರ್ಥ.

ಸಂವಿಧಾನದ ಬಗ್ಗೆ ಟೀಕೆ ಮಾಡುವವರನ್ನು ತಕ್ಷಣ ತರಾಟೆಗೆ ತೆಗೆದುಕೊಳ್ಳುವ ರಾಜಕಾರಣಿಗಳು, ಬರಹಗಾರರು, ಪ್ರಗತಿಪರರು ಮತ್ತು ಬುದ್ಧಿಜೀವಿಗಳೆನಿಸಿಕೊಂಡವರು ಇಂತಹದೊಂದು ಹೇಳಿಕೆ ನೀಡಿದ್ದ ಯು.ಆರ್‌. ಅನಂತಮೂರ್ತಿಯವರ ಸಂವಿಧಾನವಿರೋಧಿ ಹೇಳಿಕೆಯ ಬಗ್ಗೆ ತುಟಿ ಬಿಚ್ಚದೇ ಇದ್ದದ್ದು ಯಾವ ನೀತಿ?

ADVERTISEMENT

–ಡಾ.ಆರ್. ವಿಜಯಸಾರಥಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.