‘ಧರ್ಮದ ದ್ವೀಪಕ್ಕೆ ಮಾನವೀಯತೆಯ ಸೇತುವೆ’ ಸುದ್ದಿ (ಪ್ರ.ವಾ., ಜ.9) ನೈಜ ಭಾರತದ ಚಿತ್ರಣದಂತಿದೆ.
ಹೌದು, ಯಾವುದೇ ಕಪಟತನಗಳಿಲ್ಲದ ಜನಸಾಮಾನ್ಯರು ಇರುವುದೇ ಹೀಗೆ; ಬದುಕುವುದೇ ಹೀಗೆ ಎಂಬುದನ್ನು ಇದು ಎತ್ತಿತೋರಿಸಿದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸ್ನೇಹ, ಸೌಹಾರ್ದಗಳು ನಮ್ಮ ಜನಸಾಮಾನ್ಯರಲ್ಲಿ ರಕ್ತಗತವಾಗಿರುತ್ತವೆ ಎಂಬುದನ್ನು ಹಾಗೂ ಈ ಹೊತ್ತಿನಲ್ಲಿ ಇದು ಅನಿವಾರ್ಯವೆಂಬುದನ್ನು ಈ ಸಂಗತಿ ರುಜುವಾತುಪಡಿಸಿದ್ದು, ಎಲ್ಲರ ಕಣ್ತೆರೆಸುವಂತಿದೆ.
ನಮ್ಮ ತುಮಕೂರಿನ ಚಾಮುಂಡೇಶ್ವರಿ ದೇವಾಲಯವೂ ಇದಕ್ಕೊಂದು ಜ್ವಲಂತ ನಿದರ್ಶನದಂತಿದೆ. ವಿಶೇಷವಾಗಿ ಪ್ರತಿ ಶುಕ್ರವಾರ ಅನ್ಯಧರ್ಮೀಯರೂ ಇಲ್ಲಿಗೆ ತಮ್ಮ ಪುಟಾಣಿ ಮಕ್ಕಳೊಂದಿಗೆ ಬಂದು ಪೂಜಿಸುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಅದೇ ರೀತಿ ಚಿಕ್ಕಪೇಟೆಯ ಬಾಬಯ್ಯನ ವಾರ್ಷಿಕ ಉರುಸ್ಗೂ ಹಿಂದೂಗಳು ಹೋಗಿ ಪೂಜಿಸುವುದು ಸಹಜವಾಗಿದೆ.
ಎಲ್ಲಿಯವರೆಗೆ ಪಟ್ಟಭದ್ರ ದುಷ್ಟಶಕ್ತಿಗಳು, ಕಿಡಿಗೇಡಿಗಳು ಮಧ್ಯಪ್ರವೇಶಿಸುವುದಿಲ್ಲವೋ, ಅಲ್ಲಿಯವರೆಗೆ ಜನಸಾಮಾನ್ಯರು ಸೌಹಾರ್ದದಿಂದ, ನೆಮ್ಮದಿಯಿಂದ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.